ನಾಯಕ ದೇವದತ್ ಪಡಿಕ್ಕಲ್ (63 ರನ್) ಹಾಗೂ ಭರವಸೆಯ ಬೌಲರ್ಗಳಾದ ಕೆಸಿ ಕಾರಿಯಪ್ಪ, ಯಶ್ ರಾಜ್ ಅವರ ಬಿಗುವಿನ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ 23 ರನ್ಗಳಿಂದ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡದ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಮೊಹಮ್ಮದ್ ತಹಾ (11) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇನ್ನು ಮೂರನೇ ಕ್ರಮಾಂಕದಲ್ಲಿ ವಿಜಯ್ ಬಸವರಾಜ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ಕ್ರಮಾಂಕದಲ್ಲಿ ಕೆ.ಶ್ರೀಜೇತ್ (18) ಸಹ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಹುಬ್ಬಳ್ಳಿ 11.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 73 ರನ್ ಸೇರಿಸಿತ್ತು.

ನಾಲ್ಕನೇ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ಅಭಿನವ್ ಮನೋಹರ್ ಅವರು ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು. ಅಭಿನವ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್ ಸಿಡಿಸಿದರು. ಇನ್ನು ಆರಂಭಿಕ ದೇವದತ್ ಪಡಿಕ್ಕಲ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 63 ರನ್ ಕಲೆ ಹಾಕಿದರು. ಅಂತಿಮವಾಗಿ ಹುಬ್ಬಳ್ಳಿ 20 ಓವರ್ಗಳಲ್ಲಿ 7 ವಿಕೆಟ್ಗೆ 152 ರನ್ ಸೇರಿಸಿತು. ಮಂಗಳೂರು ಪರ ಕ್ರಾಂತಿ ಕುಮಾರ್ 3, ರೋನಿತ್ ಮೋರೆ 2 ವಿಕೆಟ್ ಕಬಳಿಸಿದರು.
ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಸ್ಟಾರ್ ಆಟಗಾರರು ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು. ಲೋಚನ್ ಗೌಡ್ (19), ಶರತ್ ಬಿಆರ್ (22), ತಿಪ್ಪಾ ರೆಡ್ಡಿ (21), ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ (35) ರನ್ ಕಲೆ ಹಾಕಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಹುಬ್ಬಳ್ಳಿ ಪರ ಕೆ ಸಿ ಕಾರ್ಯಪ್ಪ ಅಮೋಘ ದಾಳಿ ನಡೆಸಿದರು. ಇವರು 4 ಓವರ್ಗಳಲ್ಲಿ 9 ರನ್ ಸಿಡಿಸಿ 3 ವಿಕೆಟ್ ಪಡೆದರೆ, ಯಶ್ ರಾಜ್ 3 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ನಡೆದ ಗುಲ್ಬರ್ಗ ಮಿಸ್ಟೇಕ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳ ನಡುವೆ ಕಾದಾಟ ನಡೆಸಿತು. ಈ ವೇಳೆ ಶಿವಮೊಗ್ಗ ಪರ ಧ್ರುವ್ ಪ್ರಭಾಕರ್ (18), ನಿಹಾಲ್ ಉಲ್ಲಾಳ (18), ತುಷಾರ್ ಸಿಂಗ್ (32), ಹಾರ್ದಿಕ್ ರಾಜ್ (23), ಅವಿನಶ್ ಡಿ (16) ರನ್ ಕಲೆ ಹಾಕಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಶಿವಮೊಗ್ಗ 20 ಓವರ್ಗಳಲ್ಲಿ 7 ವಿಕೆಟ್ಗೆ 133 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್ ನಿಕ್ಕಿನ್ ಜೋಸ್ (40), ಪ್ರಜ್ವಲ್ ಪವನ್ (20) ತಂಡಕ್ಕೆ ಆಧಾರವಾದರು. ಸ್ಮರಣ್ ರವಿಚಂದ್ರನ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಸಿಡಿಸಿ ಜಯದಲ್ಲಿ ಮಿಂಚಿದತು. ಅಂತಿಮವಾಗಿ ಗುಲ್ಬರ್ಗ್ 17 ಓವರ್ಗಳಲ್ಲಿ 3 ವಿಕೆಟ್ಗೆ 135 ರನ್ ಸಿಡಿಸಿತು.