ಭರವಸೆಯ ಆಟಗಾರ ಮೊಹಮ್ಮದ್ ತಹಾ (101 ರನ್) ಬಾರಿಸಿದ ಶತಕದ ನೆರವಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂರನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ 29 ರನ್ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡದ ಆರಂಭ ಕಳಪೆಯಾಗಿತ್ತು. ಪ್ರಖರ್ ಚತುರ್ವೇದಿ (8) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 11 ರನ್ಗಳಿಂಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮೊಹಮ್ಮದ್ ತಹಾ ಹಾಗೂ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಆಧಾರವಾದರು. ಈ ಜೋಡಿ ಎರಡನೇ ವಿಕೆಟ್ಗೆ ಶತಕದ ಜತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು.

ದೇವದತ್ ಪಡಿಕ್ಕಲ್ 32 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರು. ಎಸ್ ಶ್ರೀಜೀತ್ 17 ಎಸೆತಗಳಲ್ಲಿ 27, ಅಭಿನವ್ ಮನೋಹರ್ ಅಜೇಯ 13 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇನ್ನು ಆರಂಭಿಕ ಆಟಗಾರ ಮೊಹಮ್ಮದ್ ತಹಾ 53 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಸಹಾಯದಿಂದ 101 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು.
ಶಿವಮೊಗ್ಗ ತಂಡದ ಆರಂಭಿಕ ಧ್ರುವ್ ಪ್ರಭಾಕರ್ (30) ತಂಡಕ್ಕೆ ಕೊಂಚ ಆಧಾರವಾದರು. ಆದರೆ ತಂಡ 47 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆಗ ಅನೀಶ್ವರ್ ಗೌತಮ್ (32) ಹಾಗೂ ಅನಿರುದ್ಧ್ ಜೋಶಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಅನಿರುದ್ಧ್ ಜೋಶಿ 3 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 79 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ಶಿವಮೊಗ್ಗ ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ಗೆ 187 ರನ್ ಸೇರಿಸಿತು.
ಗುಲ್ಬರ್ಗಾ ಮಿಸ್ಟಿಕ್ಸ್ ಭರ್ಜರಿ ಪ್ರದರ್ಶನ ನೀಡಿ ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಮೈಸೂರು ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 9 ವಿಕೆಟ್ಗೆ 184 ರನ್ ಸೇರಿಸಿತು. ಎಸ್ಯು ಕಾರ್ತಿಕ್ (36), ಎಂ ವೆಂಕಟೇಶ್ (77), ಹರ್ಷಿಲ್ ಧರ್ಮಣಿ (40) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಲುವನಿತ್ ಸಿಸೋಡಿಯಾ (23) ಪ್ರಜ್ವಲ್ ಪವನ್ (45) ಸಮಯೋಚಿತ ಆಟವನ್ನು ಆಡಿ ತಂಡಕ್ಕೆ ಆಧಾರವಾದರು. ಆರಂಭಿಕ ನಿಕಿನ್ ಜೋಸ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದರು. ಇನ್ನು ಸ್ಮರಣ್ ರವಿಚಂದ್ರನ್ ಅವರು ಕೇವಲ 22 ಎಸೆತಗಳಲ್ಲಿ 52 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ, 4 ಸಿಕ್ಸರ್ ಸೇರಿವೆ. ಈ ಮೂಲಕ ಗುಲ್ಬರ್ಗ್ ಮೊದಲ ಜಯ ಸಾಧಿಸಿತು.