ಸಂಘಟಿತ ಆಟದ ಪ್ರದರ್ಶನ ನೀಡಿದ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ಗಳಿಂದ ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಂತೆ ಹುಬ್ಬಳ್ಳಿ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಎಸ್ಯು ಕಾರ್ತಿಕ್ ಹಾಗೂ ಕಾರ್ತಿಕ್ ಸಿಎ ಜೋಡಿ ಮೊದಲ ವಿಕೆಟ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಿ ಮಿಂಚಿತು. 5.4 ಓವರ್ಗಳಲ್ಲಿ ಈ ಜೋಡಿ 61 ರನ್ ಸೇರಸಿತು. ಕಾರ್ತಿಕ್ ಸಿಎ 18 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಔಟ್ ಆದರು.

ಎಸ್ಯು ಕಾರ್ತಿಕ್ ಅಮೋಘವಾಗಿ ಬ್ಯಾಟಿಂಗ್ ನಡೆಸಿದರು.ಇವರು ತಮ್ಮ ನೈಜ್ಯ ಆಟವನ್ನು ಆಡಿ 43 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 71 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಎಂ ವೆಂಕಟೇಶ್ 26, ಕೆ ಗೌತಮ್ 15 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಮೈಸೂರು ವಾರಿಯರ್ಸ್ 18.5 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಯಿತು.
ಈ ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ತಂಡದ ಆರಂಭ ಸಹ ಅಮೋಘವಾಗಿತ್ತು. ಪ್ರಖರ್ ಚರ್ತುವೇದಿ ಹಾಗೂ ಮೊಹಮ್ಮದ್ ತಹಾ ಜೋಡಿ ಮೊದಲ ವಿಕೆಟ್ಗೆ 55 ರನ್ ಸೇರಿಸಿತು. ಅಭಿನವ್ ಮನೋಹರ್ 20 ರನ್ ಬಾರಿಸಿದರೆ, ಆರಂಭಿಕ ಪ್ರಖರ್ ಚರ್ತುವೇದಿ 45 ರನ್ಗೆ ಆಟ ಮುಗಿಸಿದರು. ಹುಬ್ಬಳ್ಳಿ ಟೈಗರ್ಸ್ 8.2 ಓವರ್ಗಳಲ್ಲಿ 86ರನ್ ಗಳಿಸಿದ್ದಾಗ, ಮಳೆ ಆರಂಭವಾಯಿತು.

ಇದಕ್ಕೂ ಮೊದಲ ನಡೆದ ಪಂದ್ಯಕ್ಕೂ ಮಳೆ ಕಾಟ ನೀಡಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡದ ಪರ ಧ್ರುವ್ ಪ್ರಭಾಕರ್ 44, ನಿಖಿಲ್ ಉಲ್ಲಾಲ್ 17, ತುಷಾರ್ ಸಿಂಗ್ 22, ಅನಿರುದ್ಧ್ ಜೋಶಿ ಅಜೇಯ 15, ಹಾರ್ದಿಕ್ ರಾಜ್ ಅಜೇಯ 15 ರನ್ ಬಾರಿಸಿದರು. ಅಂತಿಮವಾಗಿ ಶಿವಮೊಗ್ಗ 15.5 ಓವರ್ಗಳಲ್ಲಿ 5 ವಿಕೆಟ್ಗೆ 127 ರನ್ ಸೇರಿಸಿತು. ಗುಲ್ಬರ್ಗ್ 6.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 93 ರನ್ ಸಿಡಿಸಿತು. ಆರಂಭಿಕ ಲುವನಿತ್ ಸಿಸೋಡಿಯಾ ಅಜೇಯ 58, ನಿಕಿನ್ ಜೋಸ್ ಅಜೇಯ 34 ರನ್ ಸೇರಿಸಿ ಜಯ ಸಾಧಿಸಿತು.