ಇಂದು ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಗೆದ್ದು ಫೈನಲ್ಗೆ ಅರ್ಹತೆ ಪಡೆಯುವ ಕನಸನ್ನು ಉಭಯ ತಂಡಗಳು ಹಾಕಿಕೊಂಡಿವೆ.
ಈಗಾಗಲೇ ಗುಲ್ಬರ್ಗ ಮಿಸ್ಟೆಕ್ಸ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿರುವ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್ಗೆ ಅರ್ಹತೆ ಪಡೆದಿದೆ. ಎರಡನೇ ಸೆಮಿಫೈನಲ್ಲಿ ಗೆಲುವು ಸಾಧಿಸಿದ ತಂಡದ ವಿರುದ್ಧ, ಬೆಂಗಳೂರು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿದೆ.

ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಸ್ಥಿರ ಪ್ರದರ್ಶನವನ್ನು ನೀಡಿದೆ. ಆಡಿದ 10 ಪಂದ್ಯಗಳಲ್ಲಿ 6 ಜಯ, 4 ಸೋಲು ಕಂಡಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇನ್ನು ಹುಬ್ಬಳ್ಳಿ ಸಹ 12 ಅಂಕವನ್ನು ಕಲೆ ಹಾಕಿದ್ದು, ರನ್ ಸರಾಸರಿಯಲ್ಲಿ ಮೈಸೂರಿಗಿಂತ ಹಿಂದಿದೆ.
ಹುಬ್ಬಳ್ಳಿ ತಂಡದಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಟೂರ್ನಿಯುದ್ಧಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರ ಮೇಲೆ ಭರವಸೆ ಹೆಚ್ಚಿದೆ. ರನ್ ಗಳಿಕೆಯ ವಿಚಾರದಲ್ಲಿ ಕೆಎಲ್ ಶ್ರೀಜೇತ್ ಮುಂಚೂಣಿಯಲ್ಲಿದ್ದಾರೆ. ಇವರು ಆಡಿರುವ 10 ಪಂದ್ಯಗಳಲ್ಲಿ 47 ಸರಸಾರಿಯಲ್ಲಿ 329 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ. ಇನ್ನು ತಂಡದ ಬ್ಯಾಟಿಂಗ್ ವಿಭಾಗಕ್ಕೆ ನಾಯಕ ಮನೀಶ್ ಪಾಂಡೆ ಹಾಗೂ ಅನೇಶ್ವರ್ ಗೌತಮ್ ಆಸರೆ ಆಗಬಲ್ಲರು. ಈ ಪ್ಲೇಯರ್ಗಳು ಸಹ ಟೂರ್ನಿಯಲ್ಲಿ ರನ್ ಗುಡ್ಡೆ ಹಾಕಿದ್ದಾರೆ.
ಹುಬ್ಬಳ್ಳಿ ತಂಡದ ಬೌಲಿಂಗ್ ಸಹ ಉತ್ತಮವಾಗಿದೆ. ವಿದ್ವತ್ ಕಾವೇರಪ್ಪ (11 ವಿಕೆಟ್), ಎಲ್ ಆರ್ ಕುಮಾರ್ (14 ವಿಕೆಟ್), ಮನವಂತ್ ಕುಮಾರ್ (15 ವಿಕೆಟ್) ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸೆಮಿಫೈನಲ್ನಲ್ಲಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಮೈಸೂರು ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್ನಲ್ಲಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ. ನಾಯಕ ಕರುಣ್ ನಾಯರ್ ಬ್ಯಾಟಿಂಗ್ ವಿಭಾಗದ ಬೆನ್ನೆಲೆಬು. ಕರುಣ್ ಆಡಿದ 10 ಪಂದ್ಯಗಳಲ್ಲಿ 490 ರನ್ ಕಲೆ ಹಾಕಿದ್ದಾರೆ. ಈ ತಂಡದಲ್ಲಿರುವ ಮನೋಜ್ ಭಂಡಾರೆ (222 ರನ್), ಎಸ್ಯು ಕಾರ್ತಿಕ್ (248 ರನ್), ಜೆ.ಸುಚಿತ್ (154 ರನ್) ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಅರಿತಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲೂ ತಂಡ ಸ್ಟಾರ್ ಆಟಗಾರರನ್ನು ಹೊಂದಿದೆ. ಸಿಎ ಕಾರ್ತಿಕ್ (14 ವಿಕೆಟ್), ವಿದ್ಯಾಧರ್ ಪಾಟೀಲ್ (13 ವಿಕೆಟ್), ಜೆ.ಸುಚಿತ್ (10 ವಿಕೆಟ್), ಕೆ.ಗೌತಮ್ ಎದುರಾಳಿ ತಂಡದ ರಣ ತಂತ್ರವನ್ನು ಬೇಧಿಸಬಲ್ಲರು.