ಮಹಾರಾಜ್ ಕ್ರಿಕೆಟ್ ಟಿ20 ಟೂರ್ನಿ ರೋಚಕತೆ ಹೆಚ್ಚಿಸುತ್ತಿದೆ. ಶುಕ್ರವಾರ ನಡೆದ ಹುಬ್ಬಳ್ಳಿ ಟೈರ್ಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವಣ ಪಂದ್ಯ ಮೂರು ಸೂಪರ್ ಓವರ್ ಕಂಡಿತು. ಈ ಪಂದ್ಯ ಒಂದಲ್ಲಾ, ಎರಡಲ್ಲ, ಮೂರು ಸೂಪರ್ ಓವರ್ ಕಂಡು ರೋಚಕತೆ ಹೆಚ್ಚಿಸಿದೆ.
ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ 20 ಓವರ್ಗಳಲ್ಲಿ 164 ಬಾರಿಸಿ ಆಲ್ ಔಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು ತಂಡ ಸಹ 20 ಓವರ್ಗಳಲ್ಲಿ 164 ರನ್ ಸೇರಿಸಿ ಸರ್ವಪತನ ಕಂಡಿತು. ಮಹಾರಾಜ ಟ್ರೋಫಿಯ 17ನೇ ಪಂದ್ಯ ಟೈ ಆಯಿತು. ಫಲಿತಾಂಶ ಅರಿಯಲು ಸೂಪರ್ ಓವರ್ ನಡೆಸಲಾಯಿತು.

ಬೆಂಗಳೂರು ಬ್ಲಾಸ್ಟರ್ಸ್ ಮೊದಲ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಮಯಾಂಕ್ ಅಗರ್ವಾಲ್ ಮೊದಲ ಎಸೆತದಲ್ಲಿಯೇ ಔಟಾದರು. ಕೊನೆಯ ಎಸೆತದಲ್ಲಿ ಅನಿರುದ್ಧ್ ಜೋಶಿ ಸಿಕ್ಸರ್ ಬಾರಿಸಿ ತಂಡಕ್ಕೆ ನೆರವಾದರು. ಈ ಮೂಲಕ ಹುಬ್ಬಳ್ಳಿ ಗೆಲುವಿಗೆ 11 ರನ್ ನೀಡಲಾಯಿತು. ಮೊದಲ 4 ಎಸೆತಗಳಲ್ಲಿ ಹುಬ್ಬಳ್ಳಿ 9 ರನ್ ಸೇರಿಸಿತು. ಕೊನೆಯ ಎರಡು ಎಸೆತದಲ್ಲಿ ಕೇವಲ ಒಂದು ರನ್ ಬಾರಿಸಿದ್ದರಿಂದ ಪಂದ್ಯ ಮತ್ತೆ ಸೂಪರ್ ಓವರ್ನತ್ತ ಮುಖ ಮಾಡಿತು.
ಎರಡನೇ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 8 ರನ್ ಗಳಿಸಿತು. ಆದರೆ ಬೆಂಗಳೂರು ಬ್ಲಾಸ್ಟರ್ಸ್ನ ಸೂಪರ್ ಬ್ಯಾಟ್ ಮಾಡುತ್ತಿದ್ದಾಗ ಸುಲಭವಾಗಿ ಗೆಲ್ಲುತ್ತದೇ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಹುಬ್ಬಳಿ ಬೌಲರ್ ಬಿಗುವಿನ ದಾಳಿಯ ನೆರವಿನಿಂದ ಪಂದ್ಯ ಮತ್ತೊಮ್ಮೆ ಟೈ ಆಯಿತು. ಕೊನೆಯ 3 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ ಬೆಂಗಳೂರು ಟೈ ಮಾಡಿಕೊಂಡಿತು. ಇದರಿಂದಾಗಿ ಎರಡನೇ ಸೂಪರ್ ಓವರ್ ಸಹ ಟೈನಲ್ಲಿ ಅಂತ್ಯಕಂಡಿತು.

ಪಂದ್ಯ ರೋಚಕತೆ ಹೆಚ್ಚಿಸುತ್ತಲೇ ಇತ್ತು. ಮೂರನೇ ಸೂಪರ್ ಓವರ್ನಲ್ಲಿ ಬೆಂಗಳೂರು 12 ರನ್ ಬಾರಿಸಿತು. ಈ ವೇಳೆಯೂ ಶುಭಾಂಗ್ ಹೆಗ್ಡೆ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಮೊತ್ತವನ್ನು ವೃದ್ಧಿಸಿದರು. 13 ರನ್ಗಳ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಮೊದಲ 5 ಎಸೆತಗಳಲ್ಲಿ 9 ರನ್ ಗಳಿಸಿತ್ತು. ನಂತರ ಮನ್ವಂತ್ ಕುಮಾರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಹುಬ್ಬಳ್ಳಿ ಟೈಗರ್ಸ್ ಗೆ ಜಯದ ಮಾಲೆ ತೊಡಿಸಿದರು.