700ಕ್ಕೂ ಹೆಚ್ಚು ವಿಕೆಟ್ ಪಡೆದರೂ ಸಿಗಲಿಲ್ಲ ಮರ್ಯಾದೆ: ಅವರಿಂದ ತನಗಾದ ಅವಮಾನ ಬಿಚ್ಚಿಟ್ಟ ಹರ್ಭಜನ್!

ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚಿಗಷ್ಟೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವ ಮುನ್ನ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಧ್ಯಮ ಗೋಷ್ಠಿಯೊಂದನ್ನು ನಡೆಸಿ ನೇರವಾದ ಹೇಳಿಕೆಗಳನ್ನು ನೀಡುವುದರ ಮೂಲಕ ತಾನು ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡದ್ದು ಹೇಗೆ ಮತ್ತು ಅದರ ಹಿಂದೆ ನಡೆದ ಘಟನೆಗಳೇನು ಎಂಬುದನ್ನು ಎಲ್ಲರೆದುರು ಬಿಚ್ಚಿಟ್ಟರು. ಹೀಗೆ ವಿರಾಟ್ ಕೊಹ್ಲಿ ಹೇಳಿಕೆಗಳನ್ನು ಆಲಿಸಿದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಬಿಸಿಸಿಐ ನಡೆದುಕೊಂಡ ರೀತಿಯೇ ತಪ್ಪು ಎಂದು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಕಿಡಿಕಾರಿದರು.
ಹೀಗೆ ವಿರಾಟ್ ಕೊಹ್ಲಿ ಹೇಳಿಕೆ ನಂತರ ಬಿಸಿಸಿಐ ವಿರುದ್ಧ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಹೊತ್ತಿಕೊಂಡಿರುವ ಅಸಮಾಧಾನದ ಕಿಚ್ಚು ಇನ್ನೂ ಉರಿಯುತ್ತಲೇ ಇರುವಾಗಲೇ ಸದ್ಯ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆ ಆ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ. ಹೌದು, ಹರ್ಭಜನ್ ಸಿಂಗ್ ಡಿಸೆಂಬರ್ 24ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಣೆ ಮಾಡಿದರು. ''ಪ್ರತಿಯೊಂದು ಒಳ್ಳೆಯದಕ್ಕೂ ಅಂತ್ಯವಿದೆ ಮತ್ತು ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತೇನೆ, ಈ 23 ವರ್ಷಗಳ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಟ್ವಿಟ್ಟರ್ನಲ್ಲಿ ಬರೆದುಕೊಳ್ಳುವುದರ ಮೂಲಕ ಹರ್ಭಜನ್ ಸಿಂಗ್ ನಿವೃತ್ತಿಯನ್ನು ಘೋಷಿಸಿದರು.
ಹೀಗೆ ಡಿಸೆಂಬರ್ 24, 2021ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿರುವ ಹರ್ಭಜನ್ ಸಿಂಗ್ ಅಂತಿಮವಾಗಿ ಅಂತಾರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದು 2016ರ ಫೆಬ್ರವರಿಯಲ್ಲಿ. ಹೌದು, ತನ್ನ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿ ಬರೋಬ್ಬರಿ 5 ವರ್ಷಗಳು ಕಳೆದ ನಂತರ ಹರ್ಭಜನ್ ಸಿಂಗ್ ವಿದಾಯ ಹೇಳಿದ್ದೇಕೆ ಎಂಬ ಪ್ರಶ್ನೆ ಮತ್ತು ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಎದ್ದಿದ್ದು ಸಾಮಾನ್ಯ. ಸಾಮಾನ್ಯವಾಗಿ ಹಿರಿಯ ಕ್ರಿಕೆಟಿಗರು ಅವಕಾಶಗಳು ಕಡಿಮೆಯಾದ ಒಂದೆರಡು ವರ್ಷಗಳಲ್ಲಿಯೇ ನಿವೃತ್ತಿ ಘೋಷಿಸಿ ಬಿಡುತ್ತಾರೆ. ಆದರೆ ಹರ್ಭಜನ್ ಸಿಂಗ್ ಇಷ್ಟು ದೊಡ್ಡ ಸಮಯದ ನಂತರ ನಿವೃತ್ತಿ ಘೋಷಿಸಿದ್ದೇಕೆ ಎಂಬ ಪ್ರಶ್ನೆ ಹರ್ಭಜನ್ ನಿವೃತ್ತಿ ಘೋಷಿಸಿದಾಗಿನಿಂದ ಹಲವಾರು ಜನರ ಮನಸ್ಸಿನಲ್ಲಿ ಹುಟ್ಟಿತ್ತು. ಈ ಪ್ರಶ್ನೆಗೆ ನಿವೃತ್ತಿ ನಂತರ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ಭಜನ್ ಸಿಂಗ್ ಅವರು ನೀಡಿರುವ ಈ ಕೆಳಕಂಡ ಹೇಳಿಕೆಗಳು ಉತ್ತರಗಳು ಎಂದೇ ಹೇಳಬಹುದು..

"ಧಿಡೀರನೆ ತಂಡದಿಂದ ಸ್ಥಾನ ಕಳೆದುಕೊಂಡೆ ಎಷ್ಟೇ ಕೇಳಿದರೂ ಯಾರೂ ಕಾರಣ ತಿಳಿಸಲಿಲ್ಲ"
"ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದಿರುವ ಓರ್ವ ಆಟಗಾರ ಇದ್ದಕ್ಕಿದ್ದಂತೆ ತಂಡದಿಂದ ಸ್ಥಾನ ಕಳೆದುಕೊಳ್ಳುತ್ತಾನೆ. ಹೀಗೆ ಸ್ಥಾನ ಕಳೆದುಕೊಂಡ ಆ ಆಟಗಾರನಿಗೆ ಮತ್ತೆ ಅವಕಾಶ ಸಿಗುವುದಿಲ್ಲ ಹಾಗೂ ತಂಡದಿಂದ ಯಾಕೆ ತೆಗೆದುಹಾಕಲಾಯಿತು ಎಂಬುದಕ್ಕೆ ಉತ್ತರವನ್ನು ಕೂಡ ಯಾರೂ ನೀಡುವುದಿಲ್ಲ. ಈ ಕುರಿತಾಗಿ ನಾನು ಅನೇಕರ ಬಳಿ ಕಾರಣವನ್ನು ಕೇಳಿದೆ ಆದರೆ ಯಾರೂ ಕೂಡ ನನಗೆ ಪ್ರತ್ಯುತ್ತರವನ್ನು ನೀಡಲೇ ಇಲ್ಲ" ಎಂದು ಹರ್ಭಜನ್ ಸಿಂಗ್ ಉತ್ತಮ ಪ್ರದರ್ಶನ ನೀಡಿದರೂ ಕೂಡ ತಮ್ಮನ್ನು ತಂಡದಿಂದ ಕೈ ಬಿಟ್ಟರು ಮತ್ತು ಅದಕ್ಕೆ ಯಾವುದೇ ಕಾರಣವನ್ನು ಕೂಡ ನೀಡಲಿಲ್ಲ ಎಂದು ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಹರ್ಭಜನ್ ಸಿಂಗ್ ಇಷ್ಟು ವರ್ಷಗಳ ಕಾಲ ಅವಕಾಶಕ್ಕಾಗಿ ಎದುರು ನೋಡಿ ಕೊನೆಗೆ ನಿವೃತ್ತಿ ಘೋಷಿಸಿದ್ರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಆಗ ನನ್ನ ಬೆನ್ನಿಗೆ ಯಾರಾದರೂ ನಿಂತಿದ್ದರೆ 500ಕ್ಕೂ ಹೆಚ್ಚು ವಿಕೆಟ್ ಕಬಳಿಸುತ್ತಿದ್ದೆ
ಮೊದಲೇ ಹೇಳಿದ ಹಾಗೆ ಹರ್ಭಜನ್ ಸಿಂಗ್ 2016ರ ನಂತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ತಮಗೆ ಅವಕಾಶ ಸಿಗದೇ ಇರುವುದರ ಕುರಿತು ಬೇಸರ ವ್ಯಕ್ತಪಡಿಸಿರುವ ಹರ್ಭಜನ್ ಸಿಂಗ್ ತನಗೆ ಮತ್ತೆ ಅವಕಾಶಗಳನ್ನು ನೀಡಿದ್ದರೆ ನಿವೃತ್ತಿ ಸಮಯಕ್ಕೆ 500ರಿಂದ 550 ಟೆಸ್ಟ್ ವಿಕೆಟ್ಗಳನ್ನು ಪಡೆದಿರುತ್ತಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹರ್ಭಜನ್ ಸಿಂಗ್ ಹೇಳಿಕೆ ಬಿಸಿಸಿಐ ವಿರುದ್ಧದ ಪರೋಕ್ಷ ಆರೋಪ
ಹರ್ಭಜನ್ ಸಿಂಗ್ ಹೇಳಿಕೆಗಳನ್ನು ಗಮನಿಸಿದರೆ ಬಿಸಿಸಿಐ ಅಧಿಕಾರಿಗಳು ಬೇಜವಾಬ್ದಾರಿತನವನ್ನು ತೋರಿಸಿದ್ದರು ಎಂಬುದನ್ನು ಪರೋಕ್ಷವಾಗಿ ಹೇಳಿದಂತೆ ಕಾಣಿಸುತ್ತದೆ. ಹೌದು ತನ್ನನ್ನು ಅಂತರರಾಷ್ಟ್ರೀಯ ತಂಡದಿಂದ ಏಕಾಏಕಿ ತೆಗೆದು ಹಾಕಲಾಯಿತು ಆದರೆ ಇದಕ್ಕೆ ಯಾವುದೇ ಕಾರಣವನ್ನು ಎಷ್ಟೇ ಕೇಳಿದರೂ ಯಾರೂ ನೀಡಲಿಲ್ಲ ಎಂದು ಹರ್ಭಜನ್ ಸಿಂಗ್ ನೀಡಿರುವ ಹೇಳಿಕೆ ಬಿಸಿಸಿಐ ವಿರುದ್ಧವೇ ಎಂದು ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

700ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಕೆಟ್ ಪಡೆದ ಉತ್ತಮ ಆಟಗಾರನಿಗೆ ಸಿಕ್ಕ ಮರ್ಯಾದೆಯಿದು
ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ 953 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ 707 ವಿಕೆಟ್ ಪಡೆದುಕೊಂಡಿರುವ ಹರ್ಭಜನ್ ಸಿಂಗ್ ಇದ್ದಾರೆ. ಹೀಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವ ಹರ್ಭಜನ್ ಸಿಂಗ್ ಅವರಿಗೆ ಸಿಗಬೇಕಾದ ಮರ್ಯಾದೆ ಸಿಗದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಇಂತಹ ಸಾಧನೆಯನ್ನು ಇತರೆ ತಂಡದ ಆಟಗಾರರು ಮಾಡಿದಿದ್ದರೆ ಒಂದೊಳ್ಳೆ ಬೀಳ್ಕೊಡುಗೆ ಸಿಗುತ್ತಿತ್ತು. ಆದರೆ ಬಿಸಿಸಿಐ ಹರ್ಭಜನ್ ಸಿಂಗ್ ಸೇರಿ ಇನ್ನೂ ಮುಂತಾದ ಹಲವು ದಿಗ್ಗಜ ಆಟಗಾರರಿಗೆ ಬೀಳ್ಕೊಡುಗೆಯನ್ನು ನೀಡದೇ ಇರುವುದು ನಿಜಕ್ಕೂ ಬೇಸರದ ಸಂಗತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications