
ನವದೆಹಲಿ, ಏ. 28: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನೂತನ ನಾಯಕ ಶ್ರೇಯಸ್ ಐಯರ್ ಹಿಂದಿನ ನಾಯಕ ಗೌತಮ್ ಗಂಭೀರ್ 11 ಜನ ಆಟಗಾರರ ತಂಡದಿಂದ ಹೊರಗುಳಿದಿರುವ ಬಗ್ಗೆ ತುಟಿಬಿಚ್ಚಿದ್ದಾರೆ. ಆಡುವ ತಂಡದಿಂದ ಗಂಭೀರನ್ನು ಹೊರಗಿಡುವ ನಿರ್ಧಾರ ನಾನು ಕೈಗೊಂಡಿಲ್ಲ. ಅವರಾಗೇ ಸ್ವ ಪ್ರೇರಣೆಯಿಂದ ಹೊರಗುಳಿದರು ಎಂದಿದ್ದಾರೆ.
ಡೆಲ್ಲಿ ತಂಡ ಕಳಪೆ ಪ್ರದರ್ಶನದಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೆಳ ಸ್ಥಾನಕ್ಕೆ ಕುಸಿದಿತ್ತು. ಜೊತೆಗೆ ತನ್ನ ಬ್ಯಾಟಿಂಗ್ನಲ್ಲೂ ಗಮನಾರ್ಹ ಸುಧಾರಣೆ ಕಾಣದ ಕಾರಣದಿಂದ ಬೇಸತ್ತ ಗಂಭೀರ್ ಡೆಲ್ಲಿ ನಾಯಕತ್ವದಿಂದ ಕೆಲ ದಿನಗಳ ಹಿಂದಷ್ಟೇ ಕೆಳಗಿಳಿದಿದ್ದರು.
'ಈ ವಿಚಾರವಾಗಿ ನಾನು ಯಾರನ್ನೂ ದೂರವಾಣಿ ಮುಖಾಂತರ ಸಂಪರ್ಕಿಸಿಲ್ಲ. ತಂಡದಿಂದ ಅವರನ್ನು ಕೈ ಬಿಡುವ ಬಗ್ಗೆ ನಾನು ನಿರ್ಧಾರ ಕೈಗೊಂಡಿದ್ದಲ್ಲ. ಸ್ವತಃ ಗಂಭೀರ್ ಅವರೇ ತಂಡದಿಂದ ಹೊರಗಿರುವ ನಿರ್ಧಾರವನ್ನು ಮಾಡಿದರು. ಹಿಂದೆ ತಂಡದ ನಾಯಕನಾಗಿದ್ದ ಅವರು ತಂಡದ ಬಗ್ಗೆ ತೆಗೆದುಕೊಂಡ ಈ ನಿರ್ಧಾರ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು ಮತ್ತು ಅಷ್ಟೇ ಧೈರ್ಯಶಾಲಿಯಾದುದು' ಎಂದು ಐಯರ್ ಹೇಳಿದರು.
'ಸ್ವ-ಗೌರವದಿಂದ ಅವರು ತೆಗೆದುಕೊಂಡ ನಿರ್ಧಾರ ಸರಿಯಾಗೇ ಇದೆ. ಪಂದ್ಯವನ್ನು ಸರಿಯಾಗಿ ಆಡಲು ಸಾಧ್ಯವಾಗದಿದ್ದರೆ ಬಹುತೇಕ ನಾಯಕರು ಇಂಥ ನಿರ್ಧಾರಕ್ಕೆ ಬರುವುದು ಸಹಜ. ಅವರು ತಂಡದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಾಗ ಕಾಲಿನ್ ಅವರು ಜಯದ ಹಾದಿ ಮತ್ತೆ ಹಿಡಿಯುವ ಬಗ್ಗೆ ನನ್ನಲ್ಲಿ ಆಶಯ ವ್ಯಕ್ತಪಡಿಸಿದರಲ್ಲದೆ ಧೈರ್ಯ ತುಂಬಿದರು' ಎಂದು ಶುಕ್ರವಾರದ ಕೋಲ್ಕತ್ತ-ಡೆಲ್ಲಿ ಪಂದ್ಯದ ಬಳಿಕ ಶ್ರೇಯಸ್ ವಿಚಾರಗಳನ್ನು ಹಂಚಿಕೊಂಡರು.
ಡೆಲ್ಲಿ-ಕೋಲ್ಕತ್ತಾ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ತಂಡದ ಆರಂಭಿಕರಾದ ಕಾಲಿನ್ ಮುನ್ರೋ ಮತ್ತು ಪೃಥ್ವಿ ಶಾ ಜೊತೆಯಾಟದಿಂದ 59 ರನ್ ಕಲೆಹಾಕಿ ತಂಡದವನ್ನು ಬಲಗೊಳಿಸುವಲ್ಲಿ ನೆರವಾದರು. ಶಾ 62 (44), ಮುನ್ರೋ 33 (18) ರನ್ ಕೊಡುಗೆ ನೀಡಿದರಲ್ಲದೆ ಮತ್ತೆ ಬ್ಯಾಟ್ ಕೈಗೆತ್ತಿಕೊಂಡ ಐಯರ್ ಅಜೇಯ 93 (40) ರನ್ ಸಿಡಿಸುವ ಮೂಲಕ ಡೆಲ್ಲಿ ತಂಡವು 4 ವಿಕೆಟ್ ಕಳೆದುಕೊಂಡು ಕೋಲ್ಕತ್ತಾಕ್ಕೆ 219 ಭಾರೀ ರನ್ ಗಳ ಗುರಿ ನೀಡುವಲ್ಲಿ ನೆರವಾಗಿದ್ದರು.
ಬ್ಯಾಟಿಂಗ್ ಗಿಳಿದ ಕೋಲ್ಕತ್ತಾ ಆಂಡ್ರೆ ರಸೆಲ್ 44 (30), ಗಿಲ್ 37 (29), ಸುನೀಲ್ 26 (9) ರನ್ ಕೊಡುಗೆ ಹೊರತಾಗಿ ಪಟ ಪಟನೆ 9 ವಿಕೆಟ್ ಕಳೆದುಕೊಂಡು ಬರೀ 164 ರನ್ ಗಳಿಸಿ 55 ರನ್ಗಳಿಂದ ಡೆಲ್ಲಿ ಗೆ ಶರಣಾಯಿತು.
ಹಿಂದಿನ ನಾಯಕ, ಅನುಭವಿ ಬ್ಯಾಟ್ಸ್ಮನ್ ಗಂಭೀರ್ ತಂಡದ ನಾಯಕತ್ವದಿಂದ ಹೊರ ನಡೆದ ಮರು ಪಂದ್ಯದಲ್ಲೇ ಡೆಲ್ಲಿ ಕಾಕತಾಳೀಯವಾಗಿ ಭರ್ಜರಿ ಗೆಲುವು ದಾಖಲಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಜೊತೆಗೆ ಗಂಭೀರ್ ನಾಯಕತ್ವದಿಂದ ವಿದಾಯ, ಆಡುವ ತಂಡದಿಂದ ಹೊರಗುಳಿದಿದ್ದೂ ಕ್ರಿಕೆಟ್ ಪ್ರೇಮಿಗಳನ್ನು ಚರ್ಚೆಗೀಡು ಮಾಡಿದೆ.