
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತಂಡದಲ್ಲಿದ್ದ ಅದ್ಭುತ ಆಟಗಾರರನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡ ಅನೇಕ ಉದಾಹರಣೆಗಳಿವೆ. ಇನ್ನು ದುರಾದೃಷ್ಟವೋ ಏನೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಟೈನ್ ಮಾಡಿಕೊಳ್ಳದೇ ಆಚೆ ಬಿದ್ದ ಆಟಗಾರರು ಬೇರೆ ತಂಡ ಸೇರಿದ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅದರಲ್ಲಿಯೂ ತಮ್ಮದೇ ಹಳೆಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೇ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟ ಅನೇಕರು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಈಗಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಅದಕ್ಕೆ ಉದಾಹರಣೆಯಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಶಿಮ್ರಾನ್ ಹೆಟ್ಮಾಯರ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಇನ್ನು ಇದಕ್ಕೆ ಸಾರ್ವಕಾಲಿಕ ಅತ್ಯುತ್ತಮ ನಿದರ್ಶನವೆಂದರೆ ಯುಜ್ವೇಂದ್ರ ಚಹಲ್. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯುಜ್ವೇಂದ್ರ ಚಹಲ್ ಅವರನ್ನು ಮರಳಿ ತಂಡಕ್ಕೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಫಲವಾಗಿತ್ತು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 6.50 ಕೋಟಿ ರೂಪಾಯಿಗಳಿಗೆ ಯುಜ್ವೇಂದ್ರ ಚಾಹಲ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ಪರಿಣಾಮವಾಗಿ ಯುಜ್ವೇಂದ್ರ ಚಾಹಲ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡು ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು. ಹೌದು, 17 ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ್ದ ಯುಜ್ವೇಂದ್ರ ಚಾಹಲ್ 27 ವಿಕೆಟ್ಗಳನ್ನು ಪಡೆದುಕೊಳ್ಳುವುದರ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದುಕೊಂಡ ಬೌಲರ್ ಎನಿಸಿಕೊಂಡಿದ್ದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟ ನಂತರದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಚಾಹಲ್ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
ಹೀಗೆ ಯುಜ್ವೇಂದ್ರ ಚಾಹಲ್ ಅಬ್ಬರದ ಪ್ರದರ್ಶನ ನೀಡಿದ್ದನ್ನು ಕಂಡಿದ್ದ ಕ್ರಿಕೆಟ್ ಪ್ರೇಮಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಟ್ರೋಲ್ ಮಾಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಕ್ರಿಕೆಟ್ ದಿಗ್ಗಜರು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಯ ವಿರುದ್ಧ ಮಾತನಾಡಿದ್ದರು. ಈ ಸಾಲಿಗೆ ಇದೀಗ ವರ್ಷ ಕಳೆದ ಬಳಿಕ ಸ್ಟಾರ್ ಕ್ರಿಕೆಟಿಗನೋರ್ವ ಸೇರ್ಪಡೆಗೊಂಡಿದ್ದಾರೆ.

ಹೌದು, ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಯುಜ್ವೇಂದ್ರ ಚಾಹಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳದ್ದರ ಬಗ್ಗೆ ಮಾತನಾಡಿದ್ದಾರೆ. "ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿರುವ ಅತ್ಯುತ್ತಮ ಉಡುಗೊರೆಗಳಲ್ಲಿ ಯುಜ್ವೇಂದ್ರ ಚಾಹಲ್ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈತನನ್ನು ಹೇಗೆ ಬಿಟ್ಟುಕೊಟ್ಟಿತು ಎಂಬ ಐಡಿಯಾ ಸಹ ಇಲ್ಲ. ಯಾವಾಗಲೂ ವಿಕೆಟ್ ತೆಗೆದುಕೊಂಡು ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರ ಆತ. ಅಂತಹ ಆಟಗಾರ ಈಗ ಪಿಂಕ್ ಟೋಪಿ ಧರಿಸಿ ಆಡುತ್ತಿದ್ದಾನೆ ಎಂದರೆ ನಂಬಲಾಗುತ್ತಿಲ್ಲ. ಚಾಹಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಸ್ತಿ" ಎಂದು ಕೆವಿನ್ ಪೀಟರ್ಸನ್ ನಿನ್ನೆ ( ಏಪ್ರಿಲ್ 19 ) ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ಬಳಿಕ ಹೇಳಿಕೆ ನೀಡಿದ್ದಾರೆ.