
ಬೆಂಗಳೂರು, ಅಕ್ಟೋಬರ್ 16: ಶ್ರೀಲಂಕಾ ತಂಡದ ಮಾಜಿ ನಾಯಕ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಸನತ್ ಜಯಸೂರ್ಯ ಅವರು ತಾನು ಯಾವತ್ತಿಗೂ ಸಮಗ್ರತೆಯೊಂದಿಗೆ ಮತ್ತು ಪಾರದರ್ಶಕವಾಗಿ ಕ್ರೀಡೆಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸಿರುವುದಾಗಿ ಮಂಗಳವಾರ (ಅಕ್ಟೋಬರ್ 16) ಹೇಳಿದ್ದಾರೆ.
ಐಸಿಸಿ ಬ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿರುವುದಾಗಿ ಸೋಮವಾರ (ಅಕ್ಟೋಬರ್ 15) ಐಸಿಸಿ, ಜಯಸೂರ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಭ್ರಷ್ಟಾರ ನಿಗ್ರಹಕ್ಕೆ ಸಂಬಂಧಿಸಿ ಜಯಸೂರ್ಯ ಸಹಕರಿಸಲಿಲ್ಲ ಎಂದು ಅದು ಹೇಳಿತ್ತು. ಆದರೆ ಸನತ್, ಐಸಿಸಿ ಆರೋಪವನ್ನು ನಿರಾಕರಿಸಿದ್ದಾರೆ.
'ಭ್ರಷ್ಟಾಚಾರಕ್ಕೆ ಸಂಬಂಧಿಸಿ ನಾನು ತನಿಖೆಗೆ ಸಹಕರಿಸಿಲ್ಲ, ತನಿಖೆಗೆ ಸಹಾಯ ಮಾಡಿಲ್ಲ ಎಂದು ಐಸಿಸಿ ಆರೋಪಿಸಿದೆ. ಆದರೆ ನಾನು ಯಾವತ್ತಿಗೂ ಸಮಗ್ರತೆಯೊಂದಿಗೆ ಮತ್ತು ಪಾರದರ್ಶಕತೆಯೊಂದಿಗೆ ಕ್ರೀಡೆಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸಿದ್ದೇನೆ. ಮುಂದೆಯೂ ನಾನು ಇದನ್ನೇ ಮುಂದುವರೆಸುತ್ತೇನೆ' ಎಂದು ಜಯಸೂರ್ಯ ತಿಳಿಸಿದ್ದಾರೆ.
'ಮ್ಯಾಚ್ ಫಿಕ್ಸಿಂಗ್, ಪಿಚ್ ಫಿಕ್ಸಿಂಗ್ಸ್ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಇನ್ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ನನ್ನ ಮೇಲೆ ಯಾವುದೇ ಆರೋಪಗಳಿಲ್ಲ. ಆದರೂ ನನ್ನ ಮೇಲೆ ಭ್ರಷ್ಟಾಚಾರ ನಿಗ್ರಹ ನೀತಿ ಉಲ್ಲಂಘಿಸಿದ ಆರೋಪ ಮಾಡಲಾಗಿದೆ' ಎಂದು ಸನತ್ ಹೇಳಿದ್ದಾರೆ.