
ಎಬಿ ಡಿವಿಲಿಯರ್ಸ್ ಭಾರತದಲ್ಲಿ ಹೊಂದಿರುವಷ್ಟು ಅಭಿಮಾನಿ ಬಳಗವನ್ನು ಬಹುಶಃ ಬೇರೆ ಯಾವುದೇ ವಿದೇಶಿ ಆಟಗಾರರೂ ಸಹ ಹೊಂದಿರಲು ಮತ್ತು ಹೊಂದಲು ಸಾಧ್ಯವಿಲ್ಲ. ಕೆಲ ಭಾರತೀಯ ಸ್ಟಾರ್ ಆಟಗಾರರಿಗಿಂತಲೂ ಸಹ ಎಬಿ ಡಿವಿಲಿಯರ್ಸ್ ಭಾರತದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಎಬಿಡಿಗೆ ಇಲ್ಲಿನ ಜನ ಪ್ರೀತಿ ಮತ್ತು ಅಭಿಮಾನವನ್ನು ತೋರಿಸುತ್ತಾರೆ.
ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಎಬಿ ಡಿವಿಲಿಯರ್ಸ್ ಭಾರತೀಯ ಕ್ರೀಡಾಭಿಮಾನಿಗಳಿಂದ ಪಡೆದುಕೊಂಡಿದ್ದಂತಹ ವಿಶೇಷ ಗೌರವದ ಕುರಿತು ಮಾತನಾಡಿದ್ದಾರೆ. ಭಾರತದ ಸ್ಟಾರ್ ಆಟಗಾರರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸಿಗುವಂತಹ ಮರ್ಯಾದೆಯನ್ನು ಭಾರತೀಯ ಕ್ರೀಡಾಭಿಮಾನಿಗಳು ಎಬಿಡಿಗೆ ನೀಡಿದ ಘಟನೆಯನ್ನು ಕಣ್ಣಾರೆ ಕಂಡಿದ್ದ ಆಕಾಶ್ ಚೋಪ್ರಾ ಆ ಕ್ಷಣಗಳನ್ನು ನೆನೆದು ಎಬಿ ಡಿವಿಲಿಯರ್ಸ್ ಮೇಲೆ ಭಾರತೀಯರು ಇಟ್ಟಿರುವ ಪ್ರೀತಿ ಮತ್ತು ಅಭಿಮಾನವನ್ನು ಕೊಂಡಾಡಿದ್ದಾರೆ.
'2015ರಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ಪ್ರವಾಸವನ್ನು ಕೈಗೊಂಡಿತ್ತು. 5 ಏಕದಿನ ಪಂದ್ಯಗಳ ಸರಣಿಯಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಫಾರ್ಮ್ನಲ್ಲಿದ್ದರು, ಸರಣಿಯಲ್ಲಿ 2 ಶತಕಗಳನ್ನು ಸಿಡಿಸಿ ಮಿಂಚಿದ್ದ ಎಬಿ ಡಿವಿಲಿಯರ್ಸ್ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈದಾನಕ್ಕೆ ಪ್ರವೇಶಿಸುವ ಮುನ್ನ ಕ್ರೀಡಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರು ಎಬಿಡಿ ಎಬಿಡಿ ಎಂದು ಘೋಷಣೆ ಕೂಗಲು ಶುರುಮಾಡಿದ್ದರು ಮತ್ತು ಎಬಿಡಿ ಮೈದಾನಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸಲ್ಲಿಸಿದರು. ಧೋನಿ, ಕೊಹ್ಲಿ ಮತ್ತು ರೋಹಿತ್ ಶರ್ಮಾರಂತ ಭಾರತೀಯ ಸ್ಟಾರ್ ಆಟಗಾರರಿಗೆ ಸಿಗುವಂತಹ ಮರ್ಯಾದೆಯನ್ನು ಭಾರತೀಯರು ಎಬಿಡಿಗೆ ನೀಡಿದ್ದರು' ಎಂದು ಆಕಾಶ್ ಚೋಪ್ರಾ ಭಾರತೀಯರು ಎಬಿಡಿಗೆ ನೀಡಿದ್ದ ಗೌರವದ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.