

ಸಿಡ್ನಿ, ಡಿಸೆಂಬರ್ 1: ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಭಾರತಕ್ಕೆ ಮೊದಲ ಟೆಸ್ಟ್ ಸರಣಿ ಗೆದ್ದುಕೊಳ್ಳಲು ಇದು ಅಪೂರ್ವ ಅವಕಾಶ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ. ಜೊತೆಗೆ ಆಸೀಸ್ ಬೌಲರ್ ಗಳಿಗೆ ಭಾರತದ ಒಬ್ಬ ಬ್ಯಾಟ್ಸ್ಮನ್ ಬಗ್ಗೆ ಭೀತಿಯಿದೆ ಎಂಬುದನ್ನೂ ಸ್ಟೀವ್ ಹೇಳಿಕೊಂಡಿದ್ದಾರೆ.
'ಭಾರತ ಸರಣಿಯ ಸಲುವಾಗಿ ಸಾಕಷ್ಟು ತಯಾರಿಯೂ ನಡೆಸಿದೆ. ಜೊತೆಗೆ ಭಾರತಕ್ಕೆ ಸರಣಿ ಗೆಲ್ಲಲು ಲಭಿಸುತ್ತಿರುವ ಗಮನಾರ್ಹ ಅವಕಾಶವಿದು. ನನಗನ್ನಿಸಿದ ಮಟ್ಟಿಗೆ ಭಾರತ ಸರಣಿ ಗೆಲುವಿನ ಸಮೀಪದಲ್ಲೇ ಇದೆ' ಎಂದು ಸ್ಟೀವ್ ವಾ ಇಎಸ್ಪಿಎನ್ ಕ್ರಿಕ್ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಆಸೀಸ್ ಬೌಲರ್ ಗಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯದ್ದೇ ದೊಡ್ಡ ಭೀತಿಯುಂಟಾಗಿದೆ. ಆದರೂ ಆಸ್ಟ್ರೇಲಿಯಾ ತಂಡ ಏಷ್ಯಾದ ಕ್ರಿಕೆಟ್ ದೈತ್ಯ ಭಾರತವನ್ನು ಹಿಮ್ಮೆಟ್ಟಿಸುವ ಮೂಲಕ ಹಿಂದಿನ ದಾಖಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಲಿದೆ ಎಂದು ವಾ ತಿಳಿಸಿದ್ದಾರೆ.
ಕೊಹ್ಲಿ ಬಗ್ಗೆ ಮಾತನಾಡುತ್ತ ಸ್ಟೀವ್, ' ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾರಂತೆ ವಿರಾಟ್ ಕೊಹ್ಲಿ ಕೂಡ ಶ್ರೇಷ್ಠ ಬ್ಯಾಟ್ಸ್ಮನ್. ಕೊಹ್ಲಿಯೂ ಸಾಧನೆ ಮೂಲಕ ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಗುವುದನ್ನು ಸದಾ ನಿರೀಕ್ಷಿಸುತ್ತಿರುತ್ತಾರೆ' ಎಂದರು. ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 6ರಂದು ಅಡಿಲೇಡ್ ನಲ್ಲಿ ಆರಂಭಗೊಳ್ಳಲಿದೆ.