
ನವದೆಹಲಿ: ಜೂನ್ 18ರ ಶುಕ್ರವಾರದಿಂದ ಭಾರತ ಮತ್ತು ನ್ಯೂಜಿಲೆಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಪ್ರತಿಷ್ಠಿತ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ವಿಶ್ವ ಕ್ರಿಕೆಟ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಬಲಿಷ್ಠ ತಂಡಗಳೇ. ವಿರಾಟ್ ಕೊಹ್ಲಿ ಪಡೆ ಮತ್ತು ಕೇನ್ ವಿಲಿಯಮ್ಸನ್ ಬಳಗ ಎರಡೂ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟ್ರೋಫಿ ಎತ್ತಲು ಎದುರು ನೋಡುತ್ತಿವೆ. ಕ್ರಿಕೆಟ್ ಪರಿಣಿತರಲ್ಲಿ ಹೆಚ್ಚಿನವರು ಫೈನಲ್ನಲ್ಲಿ ನ್ಯೂಜಿಲೆಂಡ್ ಗೆಲ್ಲಲಿದೆ ಎನ್ನುತ್ತಿದ್ದಾರೆ. ಆದರೆ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಭಾರತಕ್ಕೆ ಗೆಲ್ಲುವ ಶಕ್ತಿಯಿದೆ ಎಂದಿದ್ದಾರೆ.
ಭಾರತ ಎರಡು ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿದ್ದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಮಾತನಾಡಿ, ಭಾರತ ಕಳೆದ ಕೆಲವು ವರ್ಷಗಳಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮುಖ್ಯವಾಗಿ ವಿದೇಶಗಳಲ್ಲಿ ಮಿಂಚಿದ್ದಿದೆ. ಹೀಗಾಗಿ ಎಲ್ಲಿ ಹೋದರೂ ಭಾರತಕ್ಕೆ ಗೆಲುವಿನ ಬಗ್ಗೆ ನಂಬಿಕೆಯಿದೆ ಎಂದಿದ್ದಾರೆ.
'ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಟೀಮ್ ಇಂಡಿಯಾಕ್ಕೆ ಒಳ್ಳೆಯ ಐಡಿಯಾ ಇದೆ. ಭಾರತ ಸಾಕಷ್ಟು ಬಲಿಷ್ಠವಾಗಿದೆ ಎಂದು ನನಗನ್ನಿಸುತ್ತಿದೆ. ಯಾಕೆಂದರೆ ಭಾರತ ವಿದೇಶಿ ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ, ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಗೆದ್ದಿದೆ. ಇಂಗ್ಲೆಂಡ್ ಪರಿಸ್ಥಿತಿ ವಿಭಿನ್ನವಾಗಿದೆ ನಿಜ. ಆದರೆ ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸುತ್ತದೆ ಎಂಬ ಭರವಸೆ ನನಗಿದೆ,' ಎಂದು ಯುವರಾಜ್ ಹೇಳಿದ್ದಾರೆ.