ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಲು ಬಯಸಿದ 'ದಾದಾ'

ಕೋಲ್ಕೊತಾ, ಆಗಸ್ಟ್ 02: 'ಸದ್ಯಕ್ಕೆ ಆಗದೇ ಇದ್ದರೂ ಮುಂದೊಂದು ದಿನ ಟೀಮ್ ಇಂಡಿಯಾದ ಕೋಚ್ ಆಗುವ ಬಯಕೆ ಇದೆ' ಎಂದು ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ದಾದಾ ಖ್ಯಾತಿಯ ಸೌರವ್ ಗಂಗೂಲಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.
ಸದ್ಯ ಹಾಲಿ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದ ಮುಂಬರುವ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಅಂತ್ಯಗೊಳ್ಳಲಿದೆ. ಬಳಿಕ ಭಾರತ ತಂಡದ ಕೋಚ್ ಸ್ಥಾನದಲ್ಲಿ ರವಿ ಶಾಸ್ತ್ರಿ ಮುಂದುವರಿಯುತ್ತಾರೋ ಅಥವಾ ನೂತನ ಕೋಚ್ ಆಯ್ಕೆಯಾಗುತ್ತದೋ ಎಂಬುದು ನಿರ್ಧಾರವಾಗಲಿದೆ.
"ಖಂಡಿತಾ, ಸದ್ಯಕ್ಕೆ ಆಗದೇ ಇದ್ದರು ಮುಂದೊಂದು ದಿನ ಆಗುವ ಬಯಕೆ ಇದೆ. ಇದೊಂದು ಹಂತ ದಾಟಲಿ ಮುಂದಿನ ಹಂತಕ್ಕೆ ಖಂಡಿತವಾಗಿಯೂ ಕೋಚ್ ಹುದ್ದೆಗೆ ನನ್ನ ಹೆಸರನ್ನು ಮುಂದಿಡುತ್ತೇನೆ," ಎಂದು ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ ಸಂದರ್ಭದಲ್ಲಿ ಗಂಗೂಲಿ ಹೇಳಿದ್ದಾರೆ.
ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕೂಡ ಆಗಿರುವ ಸೌರವ್ ಗಂಗೂಲಿ, ಇದರ ಹೊರತಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡ 2012ರ ಬಳಿಕ ಇದೇ ಮೊದಲ ಬಾರಿ ಐಪಿಎಲ್ನಲ್ಲಿ ನಾಕ್ಔಟ್ ಹಂತಕ್ಕೇರುವಂತೆ ಮಾಡಿದ್ದರು.
"ಸದ್ಯ ನಾನು ಹಲವು ಸಂಗತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಐಪಿಎಲ್, ಸಿಎಬಿ ಮತ್ತು ಟೆಲಿವಿಷನ್ ಕಾಮೆಂಟರಿ ಎಲ್ಲದರಲ್ಲೂ ಕೆಲಸ ಮಾಡುತ್ತಿದ್ದೇನೆ. ಇವೆಲ್ಲವನ್ನೂ ಮೊದಲು ಅಂತ್ಯಗೊಳಿಸಬೇಕಿದೆ. ಬಳಿಕ ಒಂದು ಹಂತದಲ್ಲಿ ಖಂಡಿತವಾಗಿಯೂ ಕೋಚ್ ಸ್ಥಾನಕ್ಕೆ ನನ್ನ ಹೆಸರನ್ನು ಮುಂದಿಡಲಿದ್ದೇನೆ. ಕೋಚ್ ಸ್ಥಾನ ಪಡೆಯಲು ಖಂಡಿತವಾಗಿ ನನಗೆ ಆಸಕ್ತಿಯಿದೆ. ಆದರೆ ಸದ್ಯಕ್ಕಿಲ್ಲ, ಭವಿಷ್ಯದಲ್ಲಿ ಖಂಡಿತಾ," ಎಂದಿದ್ದಾರೆ.
ಕೋಚ್ ಸ್ಥಾನಕ್ಕೆ ದೊಡ್ಡ ಹೆಸರುಗಳಿಲ್ಲ
ಇದೇ ವೇಳೆ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ನೇಮಿಸಿರುವ ಕಪಿಲ್ ದೇವ್ ಸಾರಥ್ಯದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯಾರನ್ನು ನೂತನ ಕೋಚ್ ಸ್ಥಾನಕ್ಕೆ ಕರೆತರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಗಂಗೂಲಿ, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವವರಲ್ಲಿ ಯಾವುದೇ ದೊಡ್ಡ ಹೆಸರುಗಳಿಲ್ಲ. ಹೀಗಾಗಿ ಶಾಸ್ತ್ರಿಗೆ ಮತ್ತೊಂದು ಅವಕಾಶ ಲಭ್ಯವಾಗಬಹುದು ಎಂಬ ಸುಳಿವು ನೀಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ಕೋಚ್ ಸ್ಥಾನಕ್ಕೆ ಶಾಸ್ತ್ರಿಯನ್ನೇ ಬೆಂಬಲಿಸಿದ್ದಾರೆ.
"ಕೋಚ್ ಹುದ್ದೆಗೆ ಬಂದಿರುವ ಹೆಸರುಗಳಲ್ಲಿ ದೊಡ್ಡ ಹೆಸರುಗಳು ಯಾವುದೂ ಕಾಣಿಸುತ್ತಿಲ್ಲ. ಮಹೇಲಾ ಅರ್ಜಿ ಸಲ್ಲಿಸುತ್ತಾರೆ ಎಂದು ಕೇಳಿದ್ದೆ. ಆದರೆ ಅವರು ಅರ್ಜಿ ಹಾಕಿಲ್ಲ. ಬೇರಾವ ದೊಡ್ಡ ಹೆಸರುಗಳೂ ಕೇಳಿಬಂದಿಲ್ಲ. ಹೀಗಿರುವಾಗ ಕ್ರಿಕೆಟ್ ಸಲಹಾ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ನನಗೆ ತಿಳಿದಿಲ್ಲ," ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದೇ ವೇಳೆ ಶಾಸ್ತ್ರಿ ಕೋಚ್ ಸ್ಥಾನದಲ್ಲಿ ಮುಂದುವರಿಯುವ ಕುರಿತಾಗಿ ಗಂಗೂಲಿ ಯಾವುದೇ ಹೇಳಿಕೆ ನೀಡಲು ಬಯಸಿಲ್ಲ. "ಈ ವಿಚಾರವಾಗಿ ನನ್ನ ಅಭಿಪ್ರಾಯವನ್ನು ತಡೆಯುತ್ತೇನೆ. ಈ ವಿಚಾರವಾಗಿ ಮಾತನಾಡಲು ಇದು ಸಮಯವಲ್ಲ. ಕೋಚ್ ಯಾರಾಗಬೇಕು ಎಂದು ನಿರ್ಧರಿಸುವ ವ್ಯವಸ್ಥೆಯಿಂದ ಸದ್ಯಕ್ಕೆ ಬಹಳ ದೂರವಿದ್ದೇನೆ, " ಎಂದಿದ್ದಾರೆ.
ಟ್ವಿಟರ್ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್ ಶರ್ಮಾ
ಟಿ20ಯಲ್ಲಿ ವೆಸ್ಟ್ ಇಂಡೀಸ್ ಬಲಿಷ್ಠವಾಗಿದೆ
ಇನ್ನು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಕುರಿತಾಗಿ ಮಾತನಾಡಿರುವ ದಾದಾ, "ವೆಸ್ಟ್ ಇಂಡೀಸ್ ತಂಡ ವೆಸ್ಟ್ ಇಂಡೀಸ್ ಅಂಗಣದಲ್ಲಿ ಬಲಿಷ್ಠವಾಗಿದೆ. ಅದರಲ್ಲಿ ಟಿ20 ಅವರ ನೆಚ್ಚಿನ ಆಯ್ಕೆ. ಟಿ20 ಕ್ರಿಕೆಟ್ ಆಡುವುದನ್ನು ಆನಂದಿಸುತ್ತಾರೆ. ಟಿ20ಯಲಲ್ಇ ಅವರು ಹಾಲಿ ವಿಶ್ವ ಚಾಂಪಿಯನ್ಸ್ ಕೂಡ. ಹೀಗಾಗಿ ಫ್ಲೋರಿಡಾದಲ್ಲಿ ನಡೆಯಲಿರುವ ಎರಡು ಪಂದ್ಯಗಳು ಅತ್ಯಂತ ಮಹತ್ವದ್ದು. ಟೆಸ್ಟ್ ಕ್ರಿಕೆಟ್ ಕೂಡ ಸ್ಪರ್ಧಾತ್ಮಕವಾಗಿರಲಿದೆ. ಏಕೆಂದರೆ ಇಂಗ್ಲೆಂಡ್ ಎದುರು ಅವರು ಉತ್ತಮವಾಗಿ ಆಡಿದ್ದಾರೆ. 5 ವರ್ಷಗಳ ಹಿಂದಿನ ಪ್ರವಾಸಕ್ಕಿಂತಲೂ ಈ ಬಾರಿ ಕಠಿಣ ಸವಾಲು ಎದುರಾಗಲಿದೆ. ಬಹುತೇಕ ಯುವ ಆಟಗಾರರನ್ನು ಹೊಂದಿರುವ ಭಾರತ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ," ಎಂದು ಹೇಳಿದ್ದಾರೆ.
ಆಗಸ್ಟ್ 3ರಂದು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿರುವ ಟೀಮ್ ಇಂಡಿಯಾ, ಆಗಸ್ಟ್ 22ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಮೂಲಕ ತನ್ನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಭಿಯಾನವನ್ನೂ ಆರಂಭಿಸಲಿದೆ. ಈ ಮಧ್ಯದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications