ನವದೆಹಲಿ, ಅಕ್ಟೋಬರ್ 01: ಕರ್ನಾಟಕದ ಉದಯೋನ್ಮುಖ ಆಟಗಾರ ಕೆಎಲ್ ರಾಹುಲ್ ಅವರ ಬಗ್ಗೆ ಬಿಸಿಸಿಐಗೆ ಇನ್ನೂ ಆತ್ಮವಿಶ್ವಾಸ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರಿಗಂತೂ ರಾಹುಲ್ ಅವರ ಆಟದ ಬಗ್ಗೆ ಸಂಪೂರ್ಣ ನಂಬಿಕೆ ಇದೆಯಂತೆ.
ಮುಂದಿನ ವಿಶ್ವಕಪ್ ನಲ್ಲಿ ಕೆಎಲ್ ರಾಹುಲ್ ಆಟವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಏಷ್ಯಾಕಪ್ 2018ರಲ್ಲಿ ಆಟಗಾರರ ರಿಪೋರ್ಟ್ ಕಾರ್ಡ್
ಟೆಲಿಗ್ರಾಫ್ ಜತೆ ಮಾತನಾಡುತ್ತಾ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಈ ಬಗ್ಗೆ ಈಗಲೇ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ವಿಶ್ವಕಪ್ ಗಾಗಿ ಆಡುವ ತಂಡಕ್ಕೆ ಬೇಕಾದ ಪ್ರತಿಭಾವಂತರನ್ನು ಬೆಳೆಸಬೇಕಿದೆ. ಕೆಎಲ್ ರಾಹುಲ್ ಅವರು ಆಡುವ XI ರಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನೂ ಸಾಕಷ್ಟು ಸಮಯವಿದೆ ಎಂಬುದು ನನಗೆ ಗೊತ್ತು. ಆದರೆ, ವಿಶ್ವಕಪ್ ಆಯೋಜನೆಗೊಂಡಿರುವ ಸ್ಥಳ, ಮೈದಾನಕ್ಕೆ ತಕ್ಕಂತೆ ತಂಡವನ್ನು ರೂಪಿಸಿಕೊಳ್ಳಬೇಕಿದೆ. ಭಾರತದ ಮಧ್ಯಮ ಕ್ರಮಾಂಕ ಬಲಿಷ್ಠಗೊಳಿಸಬೇಕಿದೆ ಎಂದರು.
'ರಾಹುಲ್ ಅವರಿಗೆ ಆರಂಭಿಕ ಆಟಗಾರನಾಗಿ ಅವಕಾಶ ಸಿಗದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲರು. ಟಿ20 ಆಟದ ಪ್ರಭಾವ ಹೆಚ್ಚಾಗಿರುವುದರಿಂದ, ಈಗ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದು ನಿಗದಿ ಮಾಡುವುದು ಸರಿಯಿಲ್ಲ. ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿಕೊಳ್ಳಬೇಕಿದೆ ಎಂದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಅಥವಾ ಧವನ್ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಿ, ಕೆಎಲ್ ರಾಹುಲ್ ಅವರು ಇಡೀ ಸರಣಿಯಲ್ಲಿ ಆರಂಭಿಕ ಆಟಗಾರರಾರಿ ಹೇಗೆ ಆಡುತ್ತಾರೆ ಎಂಬುದನ್ನು ನೋಡಬಹುದಾಗಿದೆ. ಆದರೆ, ಈ ಸಾಧ್ಯಾಸಾಧ್ಯತೆ ಎಲ್ಲವೂ ಬಿಸಿಸಿಐ ಮೇಲೆ ಅವಲಂಬಿಸಿದೆ.