
ಬಾರ್ಡರ್-ಗವಾಸ್ಕರ್ ಟ್ರೋಪಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಾಗ್ಪುರ ಹಾಗೂ ದೆಹಲಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಆತಿಥೇಯ ಭಾರತ ತಂಡಕ್ಕೆ ಯಾವುದೇ ಹಂತದಲ್ಲಿಯೂ ಸವಾಲಾಗದ ಆಸ್ಟ್ರೇಲಿಯಾ ತಂಡ ಸುಲಭವಾಗಿ ಶರಣಾಗಿತ್ತು.
ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಈ ಪ್ರಮಾಣದ ಯಶಸ್ಸು ಸಾಧಿಸಲು ಕಾರಣವಾಗಿದ್ದು ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಪರಿಣಾಮಕಾರಿ ಪ್ರದರ್ಶನ. ತಂಡದ ಇಬ್ಬರು ಪ್ರಮುಖ ಬೌಲರ್ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ತಂಡದ ದಾಂಡಿಗರು ಭಾರತದ ನೆಲದಲ್ಲಿ ಸೊಲ್ಲೆತ್ತದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಸ್ಪಿನ್ನರ್ಗಳು ಮಾತ್ರವಲ್ಲ ಆಸ್ಟ್ರೇಲಿಯಾದ ಸ್ಪಿನ್ನರ್ಗಳಾದ ಟಾಡ್ ಮರ್ಫಿ ಹಾಗೂ ನಾಥನ್ ಲಿಯಾನ್ ಕೂಡ ಈ ಸರಣಿಯಲ್ಲಿ ಮಿಂಚಿ ಗಮನಸೆಳೆದಿದ್ದು ಆಸಿಸ್ ಪಾಲಿಗೆ ಇದೊಂದೆ ಸಕಾರಾತ್ಮಕ ಅಂಶವಾಗಿದೆ.
ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಭಾರತದ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಆಟಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಇಬ್ಬರು ಆಟಗಾರರ ಪ್ರದರ್ಶನದ ಪರಿಣಾಮದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಇಯಾನ್ ಚಾಪೆಲ್.
"ಜಡೇಜಾ ಹಾಗೂ ಅಶ್ವಿನ್ ತಮ್ಮ ಕೌಶಲ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಅವರಿಬ್ಬರಿಗೂ ಭಾರತದ ಪಿಚ್ಗಳಲ್ಲಿ ಯಾವ ರೀತಿ ಬೌಲಿಂಗ್ ನಡೆಸಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಅಶ್ವಿನ್ ಓರ್ವ ಅದ್ಭುತವಾದ ಬೌಲರ್ ಆಗಿದ್ದು ಅವರಿಗೆ ಎಲ್ಲಿ ಬೌಲಿಂಗ್ ನಡೆಸುತ್ತೇನೆ ಎಂಬುದು ಪ್ರಮುಖವಾಗುವುದಿಲ್ಲ. ಆಸ್ಟ್ರೇಲಿಯಾದಲ್ಲಿಯೂ ಅವರು ಬೌಲಿಂಗ್ ಮಾಡುವುದನ್ನು ನಾವು ನೋಡಿದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆತ ಬಹಳ ಚಾಣಾಕ್ಷ ಆಟಗಾರನಾಗಿದ್ದು ಏನು ಮಾಡಬೇಕು ಎಂಬುದು ಬಹಳ ಚೆನ್ನಾಗಿ ತಿಳಿದಿದೆ. ಜಡೇಜಾ ಅಶ್ವಿನ್ ಅವರಷ್ಟು ಚಾಣಾಕ್ಷ ಅಲ್ಲ. ಹಾಗಿದ್ದರೂ ಅವರು ಹಲವು ವಿಚಾರಗಳನ್ನು ಕಲಿತುಕೊಂಡಿದ್ದು ಬೌಲಿಂಗ್ನಲ್ಲಿ ಸಾಕಷ್ಟು ಸುಧಾರಣೆ ಕಂಡುಕೊಂಡಿದ್ದಾರೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್.
ಇನ್ನು ಇದೇ ಸಂದರ್ಭದಲ್ಲಿ ಚಾಪೆಲ್, ಆಸ್ಟ್ರೇಲಿಯಾ ವಿರುದ್ಧ ಭಾರತದ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಹಾಗೂ ಜಡೇಜಾ ರೀತಿ ನಾಥನ್ ಲಿಯಾನ್ ಬೌಲಿಂಗ್ ದಾಳಿ ನಡೆಸುವುದು ಕಠಿಣ ಎಂದಿದ್ದಾರೆ. ನಾಥನ್ ಅಶ್ವಿನ್ ಅಲ್ಲ ಎಂದಿರುವ ಚಾಪೆಲ್ ತಮ್ಮ ಸಹಜ ಶೈಲಿಯಲ್ಲಿ ಬೌಲಿಂಗ್ ನಡೆಸಬೇಕು ಎಂದಿದ್ದಾರೆ.