ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಹೇಗಿರಲಿದೆ ಎಂಬುದನ್ನು ತಿಳಿಯಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹತಾಶರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಟೀಮ್ ಇಂಡಿಯಾ ಘೋಷಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವರದಿಗಳ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಪುರುಷರ ಆಯ್ಕೆ ಸಮಿತಿಯು ಶನಿವಾರ ಸಭೆ ಸೇರಲಿದ್ದು, ಈ ಹಿಂದೆ ತಿಳಿಸಲಾದ ಸರಣಿಗಳಿಗೆ ತಂಡಗಳನ್ನು ಆಯ್ಕೆ ಮಾಡಲಿದೆ.
ವಿಶೇಷವಾಗಿ ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡವನ್ನು ಘೋಷಿಸಲು ಕೊನೆಯ ದಿನಾಂಕ ಜನವರಿ 12 ಭಾನುವಾರವಾಗಿದೆ. ಟೀಮ್ ಇಂಡಿಯಾ ಜನವರಿ 22 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಜನವರಿ 6 ರಂದು ಏಕದಿನ ಸರಣಿ ಆರಂಭವಾಗಲಿದೆ.

ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ ತಂಡವನ್ನು ಪ್ರಕಟಿಸುವುದನ್ನು ಬಿಸಿಸಿಐ ವಿಳಂಬಗೊಳಿಸಬಹುದು. ಐಸಿಸಿ ಮಾರ್ಗಸೂಚಿಗಳನ್ನು ಅನುಸರಿಸಿ ಬಿಸಿಸಿಐ ಆಯ್ಕೆ ಸಮಿತಿಯು ಜನವರಿ 12 ರೊಳಗೆ ಚಾಂಪಿಯನ್ಸ್ ಟ್ರೋಫಿಗಾಗಿ ತಾತ್ಕಾಲಿಕ ತಂಡವನ್ನು ಪ್ರಕಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ನಡುವೆ ಚಾಂಪಿಯನ್ಸ್ ಟ್ರೋಫಿಗೆ ಯಾವ ಬಾಲರ್ಸ್ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿಸಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ಮಿನಿ ವಿಶ್ವಕಪ್ ಎಂದೂ ಕರೆಯುತ್ತಾರೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಭಿಯಾನ ಶುರು ಮಾಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ದುಬೈನಲ್ಲಿ ಫೆಬ್ರವರಿ 23 ರಂದು ನಡೆಯಲಿದೆ. ಮಾರ್ಚ್ 2 ರಂದು ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಬಲಿಷ್ಠ ತಂಡಗಳನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಅಪಾಯಕಾರಿ ಬೌಲರ್ಸ್ ಅನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದೆ.
ಭಾರತ ತಂಡದ ಒನ್ ಮ್ಯಾನ್ ಆರ್ಮಿ ಎಂದೇ ಖ್ಯಾತಿ ಗಳಿಸಿರುವ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಿಗೆ ಮೊಹಮ್ಮದ್ ಸಿರಾಜ್ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಸಾಥ್ ನೀಡಲು ಸಜ್ಜಾಗಿದ್ದು, ಇಬ್ಬರು ವೇಗಿಗಳಿಗೆ ತಂಡದಲ್ಲಿ ಸ್ಥಾನ ಸಿಗಲಿದೆ.
ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರ ಫಾರ್ಮ್ ಮೇಲೆ ಅನುಮಾನಗಳಿವೆ. ಆದರೂ ಮೊಹಮ್ಮದ್ ಸಿರಾಜ್ ಅವರಂತಹ ಸ್ಟಾರ್ ವೇಗದ ಬೌಲರ್ ದುಬೈ ಪಿಚ್ಗಳಿಗೆ ಅವಶ್ಯಕತೆಯಿದೆ. ಇನ್ನೂ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರು ಚಾಂಪಿಯನ್ಸ್ ಟ್ರೋಫಿಗೆ ಫಿಟ್ ಆಗುವ ನಿರೀಕ್ಷೆಯಿದೆ. ಮೊಹಮ್ಮದ್ ಶಮಿ ಕೂಡ ಒಂದು ವರ್ಷದ ಬಳಿಕ ಟೀಮ್ ಇಂಡಿಯಾ ಸೇರು ತವಕದಲ್ಲಿದ್ದಾರೆ.
ಈ ಮೂವರು ವೇಗಿಗಳೊಂದಿಗೆ ಮೀಸಲು ಬೌಲರ್ ಆಗಿ ಅರ್ಷದೀಪ್ ಸಿಂಗ್ ಅವರನ್ನು ಟೀಮ್ ಇಂಡಿಯಾ ದುಬೈಗೆ ಕರೆದುಕೊಂಡು ಹೋಗಬಹುದು. ಇನ್ನುಳಿದಂತೆ ಸ್ಪಿನ್ನರ್ಗಳ ಪೈಕಿ ವಿಜಯ್ ಹಜಾರೆ ಟ್ರೋಫಿಯಲ್ಲಿ 18 ವಿಕೆಟ್ಗಳನ್ನು ಕಬಳಿಸಿ ಮಿಂಚಿತ್ತಿರುವ ವರುಣ್ ಚಕ್ರವರ್ತಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯಿ ಕೂಡ ಸ್ಪಿನ್ನರ್ಸ್ ಕೋಟಾದಲ್ಲಿ ತಂಡದಲ್ಲಿ ಆಡುವ ಸಾಧ್ಯತೆಯಿದೆ.