ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಸಂಘಟಿತ ಆಟ ಎಲ್ಲರ ಚಿತ್ತ ಕದ್ದಿದೆ. ಪ್ರತಿಯೊಬ್ಬ ಆಟಗಾರ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಈ ಮೂಲಕ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಒಬ್ಬೊಬ್ಬ ಮ್ಯಾಚ್ ವಿನ್ನರ್ಗಳು ತಮ್ಮದೇ ಧಾಟಿಯಲ್ಲಿ ತಂಡಕ್ಕೆ ಕಾಣಿಕೆ ನೀಡಿದ್ದಾರೆ.
ಭಾರತ ಸಂಘಟಿತ ಆಟವಾಡಿದ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಇದಕ್ಕೂ ಮೊದಲು ಇದ್ದ ಹಲವು ಪ್ರಶ್ನೆಗಳಿಗೆ, ದುಬೈನಲ್ಲಿ ಉತ್ತರ ನೀಡಿದೆ. ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸೋಲು, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಟೀಮ್ ಇಂಡಿಯಾ ಆಟಗಾರರ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದ್ದವು. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡದೇ ಇದಿದ್ದರೆ, ಹಲವು ಆಟಗಾರರ ಸ್ಥಾನಕ್ಕೆ ಕುತ್ತು ಬರುತ್ತಿತ್ತು.

ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಕೋಚ್ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ, ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಶಯ ಆರಂಭವಾಗಿತ್ತು. ಡ್ರೆಸ್ಸಿಂಗ್ ರೂಮ್ನ ಮಾತುಗಳು ಮಾಧ್ಯಮಗಳಿಗೆ ಆಹಾರವಾಗಿದ್ದವು. ಅಲ್ಲದೆ ಸತತ ಸರಣಿ ಸೋಲು ಆಟಗಾರರನ್ನು ಕಂಗೆಡಿಸಿತ್ತು. ಇದಾದ ಬಳಿಕ ಬಿಸಿಸಿಐ ಸಹ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡದೆ ಇದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಸಹ ತಿಳಿಸಿತ್ತು. ಆದರೆ ದುಬೈನಲ್ಲಿ ಟೀಮ್ ಇಂಡಿಯಾ ನೀಡಿದ ಪ್ರದರ್ಶನ ಎಲ್ಲರ ಬಾಯಿ ಮುಚ್ಚಿಸಿದೆ.
ಟೀಮ್ ಇಂಡಿಯಾ ಪರ ಯುವ ಆಟಗಾರರು ಕಮಾಲ್ ಪ್ರದರ್ಶನ ನೀಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಮಾಡಿರುವ ಶ್ರೇಯಸ್ ಅಯ್ಯರ್ ಪ್ರಬದ್ಧ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಇದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 20 ರನ್ ಬಾರಿಸಿದ್ರೆ ಇವರು ಸಹ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ಪಡೆಯಬಹುದಿತ್ತು. ಆದರೆ ಸಂಯಮ ಕಳೆದುಕೊಂಡ ಅಯ್ಯರ್ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು.
ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಅವಶ್ಯಕತೆ ಇತ್ತು. ಆದರೆ ವಿರಾಟ್ ಒಂದು ರನ್ಗೆ ಆಟ ಮುಗಿಸಿದರು. ಟೂರ್ನಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಬ್ಯಾಟ್ ಫೈನಲ್ನಲ್ಲಿ ಅಬ್ಬರಿಸಿತು. ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಶುಭಮನ್ ಗಿಲ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿ ಮಿಂಚಿದರು. ಒಟ್ಟಾರೆ ಟೂರ್ನಿಯಲ್ಲಿ ರಚಿನ್ ರವೀಂದ್ರ 263 ರನ್ ಸಿಡಿಸಿ ಟಾಪ್ ರನ್ ಸ್ಕೋರ್ ರ ಆದ್ರು.
| ಆಟಗಾರ | ಪಂದ್ಯ | ಒಟ್ಟು ರನ್ |
|---|---|---|
| ಶ್ರೇಯಸ್ ಅಯ್ಯರ್ | 5 | 243 |
| ವಿರಾಟ್ ಕೊಹ್ಲಿ | 5 | 218 |
| ಶುಭಮನ್ ಗಿಲ್ | 5 | 188 |
| ರೋಹಿತ್ ಶರ್ಮಾ | 5 | 180 |
| ಕೆಎಲ್ ರಾಹುಲ್ | 5 | 140 |
| ಅಕ್ಷರ್ ಪಟೇಲ್ | 5 | 109 |
| ಹಾರ್ದಿಕ್ ಪಾಂಡ್ಯ | 5 | 99 |
| ರವೀಂದ್ರ ಜಡೇಜಾ | 5 | 27 |
| ಮೊಹಮ್ಮದ್ ಶಮಿ | 5 | 5 |
| ಕುಲ್ದೀಪ್ ಯಾದವ್ | 5 | 1 |
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಕೊನೆಯ ದಿನ ಅವಕಾಶವನ್ನು ಪಡೆದಿದ್ದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅಮೋಘ ಪ್ರದರ್ಶನ ನೀಡಿದರು. ಇವರು ಹಾಗೂ ಮೊಹಮ್ಮದ್ ಶಮಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದ್ದು ವಿಕೆಟ್ ಬೇಟೆಯಲ್ಲಿ ಮುಂದಿದ್ದರು. ಇವರಿಬ್ಬರ ಬುಟ್ಟಿಯಲ್ಲಿ 9 ವಿಕೆಟ್ಗಳಿದ್ದವು. ಇವರಿಬ್ಬರಲ್ಲಿ ಯಾರಾದ್ರೂ ಇನ್ನು ಎರಡು ವಿಕೆಟ್ ಪಡೆದಿದ್ದರೆ, ಗೋಲ್ಡನ್ ಬೌಲ್ ಭಾರತದ ಪಾಲಾಗುತ್ತಿತ್ತು. ಈ ಪ್ರಶಸ್ತಿ ನ್ಯೂಜಿಲೆಂಡ್ ತಂಡದ ಮ್ಯಾಟ್ ಹೆನ್ರಿ ಪಾಲಾಯಿತು. ಇವರು ಟೂರ್ನಿಯಲ್ಲಿ 10 ವಿಕೆಟ್ ಸಾಧನೆ ಮಾಡಿದ್ದಾರೆ.
| ಆಟಗಾರ | ಪಂದ್ಯ | ವಿಕೆಟ್ |
|---|---|---|
| ವರುಣ್ ಚಕ್ರವರ್ತಿ | 3 | 9 |
| ಹರ್ಷಿತ್ ರಾಣಾ | 2 | 4 |
| ಮೊಹಮ್ಮದ್ ಶಮಿ | 5 | 9 |
| ಕುಲ್ದೀಪ್ ಯಾದವ್ | 5 | 7 |
| ಹಾರ್ದಿಕ್ ಪಾಂಡ್ಯ | 5 | 4 |
| ರವೀಂದ್ರ ಜಡೇಜಾ | 5 | 5 |
| ಅಕ್ಷರ್ ಪಟೇಲ್ | 5 | 5 |