

ಕೋಲಂಬೊ, ಅಕ್ಟೋಬರ್ 15: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಸನತ್ ಜಯಸೂರ್ಯ ವಿರುದ್ಧ ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆ ಆರೋಪ ದಾಖಲಾಗಿದೆ.
ಜಯಸೂರ್ಯ ಅವರ ವಿರುದ್ಧ ಐಸಿಸಿ ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯ ವಿಧಿ 2.4.6 ಮತ್ತು 2.4.7ರ ಅಡಿಯಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ.
ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಯಾವುವು ಮತ್ತು ಯಾವ ಕಾರಣಕ್ಕೆ ಎಂಬುದನ್ನು ಐಸಿಸಿ ಬಹಿರಂಗಪಡಿಸಿಲ್ಲ.
ಐಸಿಸಿಯೊಂದಿಗೆ ಸಹಕರಿಸಲು ವಿಫಲ ಅಥವಾ ನಿರಾಕರಣೆ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕ ನಡೆಸುವ ತನಿಖೆಗೆ ಅಡ್ಡಿ ಪಡಿಸುವಿಕೆ ಅಥವಾ ವಿಳಂಬ ಮಾಡುವಿಕೆಗೆ ಸಂಬಂಧಿಸಿದಂತೆ ಆರೋಪ ಮಾಡಲಾಗಿದೆ.
ಈ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಲು ಐಸಿಸಿ ಜಯಸೂರ್ಯ ಅವರಿಗೆ ಸೋಮವಾರದಿಂದ (ಅಕ್ಟೋಬರ್ 15) ಎರಡು ವಾರಗಳ ಸಮಯ ನೀಡಿದೆ.