ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಿದ್ದವು. ಈ ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನ ಅಲಂಕರಿಸಿದೆ. ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಸಾಮ್ರಾಟನಾಗಿ ಹೊರಹೊಮ್ಮಿದೆ. ಅಲ್ಲದೆ ತವರಿನಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಈ ಮೆಗಾ ಟೂರ್ನಿ ಮುಗಿದು ತಿಂಗಳೇ ಮುಗಿದಿದೆ. ಈಗ ಈ ಟೂರ್ನಿಗೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಟಿ20 ವಿಶ್ವಕಪ್ 2026ರ ಪಂದ್ಯದ ತನಿಖೆ ಆರಂಭಿಸಿದೆ.
ಟಿ20 ವಿಶ್ವಕಪ್ನ 31ನೇ ಪಂದ್ಯದಲ್ಲಿ ಕೆನಾಡ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲ ಮ್ಯಾಚ್ ಫಿಕ್ಸಿಂಗ್ ನಡೆದಿರಬಹುದು ಎಂಬ ಅನುಮಾನಗಳು ಶುರುವಾಗಿದೆ. ಈ ಪಂದ್ಯದಲ್ಲಿ ಕೆನಡಾ ನಾಯಕ ದಿಲ್ಪ್ರೀತ್ ಬಾಜ್ವಾ ಬೌಲಿಂಗ್ ಮಾಡಿದ ಓವರ್ ಅನುಮಾನ ಹುಟ್ಟಿಸಿದೆ. ಇವರ ಬಗ್ಗೆ ಈಗ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೆನಡಾದ ಸರ್ಕಾರಿ ಸ್ವಾಮ್ಯದ ಚಾನೆಲ್ ಸಿಬಿಸಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

'ದಿ ಫಿಫ್ತ್ ಎಸ್ಟೇಟ್' ಎಂಬ ಶೀರ್ಷಿಕೆಯ ಅಡಿಯಲ್ಲಿ ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಸಿಬಿಸಿ) ನ ತನಿಖಾ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಈ ಸಾಕ್ಷ್ಯಚಿತ್ರ 43 ನಿಮಿಷಗಳದ್ದಾಗಿದೆ.ಈ ಸಾಕ್ಷ್ಯ ಚಿತ್ರ ಪ್ರಸಾರದ ಬಳಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಕೆನಡಾ ಕ್ರಿಕೆಟ್ ಬೆಳವಣಿಗೆ, ವ್ಯವಹಾರಗಳು, ಆಟಗಾರರ ಮೇಲಿನ ಒತ್ತಡ, ಅಲ್ಲದೆ ಅನುಮಾನಾಸ್ಪದ ಪಂದ್ಯಗಳ ಬಗ್ಗೆ ಈ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಇನ್ನು ಇದೇ ಸಾಕ್ಷ್ಯಚಿತ್ರದಲ್ಲಿ ಒಂದು ಆಡಿಯೋ ಕ್ಲಿಪ್ ಸಹ ಇದೆ. ಈ ಕ್ಲಿಪ್ನಲ್ಲಿ ಆಗಿನ ಕೋಚ್ ಖುರ್ರಾಮ್ ಚೋಹನ್ ಅವರು ಕ್ರಿಕೆಟ್ ಕೆನಡಾದ ಹಿರಿಯ ಮಂಡಳಿಯ ಸದಸ್ಯರು ತಂಡದಲ್ಲಿ ಆಟಗಾರರನ್ನು ಸೇರಿಸಿಕೊಳ್ಳಲು ಒತ್ತಡ ಹೇರುತ್ತಿದ್ದರು ಎಂದು ತೋರಿಸಲಾಗಿದೆ.
ಇಎಸ್ಪಿಎನ್ ಕ್ರಿಕ್ಇನ್ಫೊ ವರದಿಯ ಪ್ರಕಾರ, ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ಕೆನಡಾ ಕ್ರಿಕೆಟ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪಗಳ ತನಿಖೆಯನ್ನು ಪ್ರಾರಂಭಿಸಿದೆ. ಈ ತನಿಖೆಯ ಕೇಂದ್ರ ಬಿಂದು ನ್ಯೂಜಿಲೆಂಡ್ ವಿರುದ್ಧದ ಇನಿಂಗ್ಸ್ನ 5ನೇ ಓವರ್ ಆಗಿದೆ. ಈ ಓವರ್ ಕೆನಡಾ ನಾಯಕ ದಿಲ್ಪ್ರೀತ್ ಬಾಜ್ವಾ ಮಾಡಿದರು. ಅಲ್ಲದೆ ನೋ-ಬಾಲ್, ವೈಡ್ ಹಾಕಿ 15 ರನ್ ಬಿಟ್ಟುಕೊಟ್ಟಿದ್ದರು. ಈ ಓವರ್ ಬಗ್ಗೆ ತನಿಖೆ ನಡೆಯುತ್ತಿದೆ.
ಟಿ20 ವಿಶ್ವಕಪ್ನಲ್ಲಿ ಕೆನಡಾ ಡಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಈ ವೇಳೆ ಕೆನಡಾ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿತ್ತು.