ದ.ಆಫ್ರಿಕಾ ಶತಾಯಗತಾಯ ಹೋರಾಟ
ಹಾಗೆ ನೋಡಿದರೆ ನಾವು ಸಾವು ಸಮೀಪಿಸಿದಾಗಲೇ ಜೀವದ ಹಂಗುತೊರೆದು ಹೋರಾಡೋದು, ಗೆದ್ದು ನಿಟ್ಟುಸಿರು ಬಿಡೋದು ಅಲ್ಲವಾ?. ದಕ್ಷಿಣ ಆಫ್ರಿಕಾವೂ ಈಗ ಇದೇ ಸ್ಥಿತಿಯಲ್ಲಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾ ವಿರುದ್ಧ ಸೋತಿರುವ ಪ್ರೋಟಿಯಾಸ್ಗೆ ಭಾರತ ವಿರುದ್ಧದ ಗೆಲುವು ಅತೀ ಅನಿವಾರ್ಯವಾಗಿದೆ. ಹಾಗಾಗಿ ಭಾರತ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಸೆಣಸಾಟ ರೋಚಕ ಅನ್ನಿಸೋದನ್ನು, ರಂಗೇರೋದನ್ನು ನಿರೀಕ್ಷಿಸಲಾಗಿದೆ.
ಭಾರತವೂ ಗೆಲುವಿನತ್ತ ಕಣ್ಣು
ಇತ್ತ ಭಾರತವೂ ಮೊದಲ ಪಂದ್ಯದಲ್ಲೇ ಗೆಲುವಿನತ್ತ ಕಣ್ಣಿಟ್ಟಿದೆ. ಭಾರತಕ್ಕೆ ಮೊದಲ ಪಂದ್ಯ, ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್ ಪ್ರವೇಶದ ನಿಟ್ಟಿನಲ್ಲಿ ಇದು ಗೆಲ್ಲಲೇಬೇಕಾದ ಪಂದ್ಯ. ಹೀಗಾಗಿ ಜೂನ್ 5ರ ಭಾರತ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯ ಭಾರೀ ಜಿದ್ದಾಜಿದ್ದಿ ಅನ್ನಿಸುವ ನಿರೀಕ್ಷೆಯಿದೆ ಎನ್ನೋದಕ್ಕೆ ಇಷ್ಟು ಅಂಶಗಳು ಸಾಕಾದೀತು.
ಒಬ್ಬಿಬ್ಬರನ್ನೇ ಅವಲಂಬಿಸಿಲ್ಲ
ದಕ್ಷಿಣ ಆಫ್ರಿಕಾವಾಗಲಿ ಭಾರತವಾಗಲೀ ಒಬ್ಬಿಬ್ಬರು ಆಟಗಾರರನ್ನೇ ಅವಲಂಭಿಸಿದೆ ಅನ್ನೋದಕ್ಕಾಗದು. ಕ್ರಿಕೆಟ್ ತಂಡ ಸ್ಪರ್ಧೆಯಾದ್ದರಿಂದ ಆಟದ ವೇಳೆ ತಂಡದಲ್ಲಿರುವ ಯಾವ ಆಟಗಾರನೂ ಬೆರಗಿನ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ ಇಂಥವರು ಆಟ ಬದಲಿಸಬಲ್ಲರು. ಹಾಗೇ ದಕ್ಷಿಣ ಆಫ್ರಿಕಾದಲ್ಲಿ ಕ್ವಿಂಟನ್ ಡಿ ಕಾಕ್, ಫಾ ಡು ಪ್ಲೆಸಿಸ್, ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್ ಅವರಂತ ಅಪಾಯಕಾರಿ ಆಟಗಾರರು ಈಗಲೂ ಇದ್ದಾರೆ.
ಆಫ್ರಿಕಾಕ್ಕೆ ಹೆಚ್ಚು ಗೆಲುವು
ಏಕದಿನ ಕ್ರಿಕೆಟ್ನಲ್ಲಿ ಭಾರತದ ಬೆನ್ನಲ್ಲೇ ಅಂದರೆ 3ನೇ ಶ್ರೇಯಾಂಕದಲ್ಲಿರುವ ದಕ್ಷಿಣ ಆಫ್ರಿಕಾ ಕೂಡ ವಿಶ್ವದ ಬಲಿಷ್ಠ ತಂಡವೆನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೊಂದು ಗಮ್ಮತ್ತಿನ ಸಂಗತಿಯೆಂದರೆ ವಿಶ್ವಕಪ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈವರೆಗೆ ಒಟ್ಟು 4 ಸಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ ಒಂದುಸಾರಿ ಗೆದ್ದಿದ್ದರೆ, ಆಫ್ರಿಕಾ ಮೂರುಸಾರಿ ಗೆದ್ದಿದೆ. ಒಟ್ಟಿನಲ್ಲಿ ಇತ್ತಂಡಗಳ ಪಂದ್ಯ ಜಿದ್ದಾಜಿದ್ದಿ ಅನ್ನಿಸಲಿ. ಆದರೆ ಅಂತಿಮವಾಗಿ ಭಾರತವೇ ಗೆಲ್ಲಲಿ ಅಂತ ಆಶಿಸೋಣ.