ಚೆನ್ನೈ: ಭಾರತ ಹಾಗೂ ಜಿಂಬಾಬ್ವೆ ನಡುವಣ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡಗಳು ಲೀಗ್ ಹಂತದಲ್ಲಿ ಅಜೇಯ ಓಟವನ್ನು ಮುಂದುವರೆಸಿದ್ದು, ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದ್ದವು. ಆದರೆ ಸೂಪರ್ 8 ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೂರ್ಯ ಪಡೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೋಲು ಕಂಡಿತ್ತು. ಇನ್ನು ಜಿಂಬಾಬ್ವೆ, ವಿಂಡೀಸ್ ವಿರುದ್ಧ ಆಘಾತ ಅನುಭವಿಸಿದೆ. ಹೀಗಾಗಿ ಗುರುವಾರ ನಡೆಯಲಿರುವ ಪಂದ್ಯ ಎರಡೂ ತಂಡಗಳಿಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ತಂಡಗಳು ಈ ಮೊದಲು ಟಿ20 ವಿಶ್ವಕಪ್ನಲ್ಲಿ ಒಂದು ಬಾರಿ ಮುಖಾಮುಖಿಯಾಗಿವೆ. ಆಸ್ಟ್ರೇಲಿಯಾದಲ್ಲಿ 2022ರಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಇಂತಹದ್ದೇ ಸಾಧನೆಯನ್ನು ಮಾಡುವ ಕನಸನ್ನು ಸೂರ್ಯಪಡೆ ಹೊಂದಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸುವ ಆಸೆಯನ್ನು ಹೊಂದಿದೆ.

ಟೀಮ್ ಇಂಡಿಯಾ ಮಹತ್ವದ ಪಂದ್ಯಕ್ಕಾಗಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಆಲ್ರೌಂಡರ್ ರೂಪದಲ್ಲಿ ಆಡಿದ್ದ ವಾಶಿಂಗ್ಟನ್ ಸುಂದರ್ ಸ್ಥಾನದಲ್ಲಿ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಿಂಕು ಸಿಂಗ್ ಅವರ ಸ್ಥಾನವನ್ನು ಸಂಜು ಸ್ಯಾಮ್ಸನ್ ತುಂಬಲು ಸಿದ್ಧರಾಗಿದ್ದಾರೆ. ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವ ಅಭಿಷೇಕ್ ಶರ್ಮಾ ಅವರ ಮೇಲೆ ತಂಡ ಇನ್ನು ನಂಬಿಕೆಯನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ್ದರಿಂದ, ಟೀಮ್ ಇಂಡಿಯಾ ರನ್ ರೇಟ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಿನ ಎರಡೂ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದರೂ ಸೆಮಿಫೈನಲ್ ಹಂತವನ್ನು ಪ್ರವೇಶಿಸಬಹುದಾಗಿದೆ.
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಜಿಂಬಾಬ್ವೆ ತಂಡ: ತಡಿವಾನಾಶೆ ಮರುಮಣಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ರಿಯಾನ್ ಬರ್ಲ್, ಸಿಕಂದರ್ ರಾಜಾ, ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ರಾಡ್ ಎವಾನ್ಸ್, ಟಿನೊಟೆಂಡಾ ಮಾಪೋಸಾ, ಬ್ಲೆಸಿಂಗ್ ಮುಜರಬಾನಿ, ರಿಚರ್ಡ್ ನ್ಗರಾವಾ.