ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ನಲ್ಲಿ ತನ್ನ ಪಂದ್ಯಗಳನ್ನು ಭಾರತದಿಂದ ಬೇರೆ ಕಡೆಗೆ ಶಿಫ್ಟ್ ಮಾಡುವಂತೆ ಐಸಿಸಿಗೆ ಮನವಿಯನ್ನು ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ. ಎರಡೂ ಸಂಸ್ಥೆಗಳು ವರ್ಚುವಲ್ ಮೀಟಿಂಗ್ ಮಾಡಿದವು. ಈ ವೇಳೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲೇಬೇಕು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶ ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಬರಲು ಹಿಂದೇಟು ಹಾಕಿತ್ತು. ಆದರೆ ಐಸಿಸಿ ಈ ಮನವಿ ತಿರಸ್ಕರಿಸಿದೆ. ಈಗಾಗಲೇ ನಿಗದಿ ಪಡಿಸಿದ ಸ್ಥಳ ಹಾಗೂ ದಿನಾಂಕದಂದೇ ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ತಿಳಿಸಿದೆ. ಇನ್ನು ಬಾಂಗ್ಲಾದೇಶ ಭಾರತಕ್ಕೆ ಬಂದು ಪಂದ್ಯಗಳನ್ನು ಆಡಲು ನಿರಾಕರಿಸಿದರೆ, ತಂಡವು ಪಂದ್ಯದ ಅಂಕಗಳನ್ನು ಕಳೆದುಕೊಳ್ಳಲಿದೆ ಎಂದು ಐಸಿಸಿ ಎಚ್ಚರಿಕೆಯನ್ನು ನೀಡಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪ್ರಕಾರ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬೆಳೆವಣಿಗೆಗೂ ಮೊದಲು ಕೋಲ್ಕತ್ತ ನೈಟ್ ರೈಡರ್ಸ್ ಮಿನಿ ಹರಾಜಿನಲ್ಲಿ 9.2 ಕೋಟಿ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು. ಇದರಂತೆ ಕೆಕೆಆರ್ ಬಾಂಗ್ಲಾ ಬೌಲರ್ ಬಿಟ್ಟಬಳಿಕ ಅವರಿಗೆ ಬದಲಿ ಆಟಗಾರನನ್ನು ಪಡೆಯಲು ಅವಕಾಶ ನೀಡುವುದಾಗಿ ಬಿಸಿಸಿ ತಿಳಿಸಿತ್ತು.
ಮುಸ್ತಾಫಿಜುರ್ ರಹಮಾನ್ ಅವರನ್ನು ಕೆಕೆಆರ್ ತಂಡ ಕೈ ಬಿಟ್ಟ ಬೆನ್ನಲ್ಲೆ, ಬಾಂಗ್ಲಾದೇಶವೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ನೆರ ಪ್ರಸಾರಕ್ಕೆ ತಡೆಯನ್ನು ಒಡ್ಡಿತ್ತು.
ಮುಸ್ತಾಫಿಜುರ್ ರಹಮಾನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಬೀಳುತ್ತಲೇ ಪಾಕಿಸ್ತಾನ್ ಸೂಪರ್ ಲೀಗ್ (PSL) ಸೇರಿಕೊಂಡಿದ್ದಾರೆ.
ಬಾಂಗ್ಲಾದೇಶ ಈ ಮೊದಲಿನ ವೇಳಾಪಟ್ಟಿಯಂತೆ ಭಾರತದಲ್ಲಿ ಒಟ್ಟು ನಾಲ್ಕು ಪಂದ್ಯಗಳ ಲೀಗ್ ಪಂದ್ಯವನ್ನು ಆಡಬೇಕಿತ್ತು. ಈ ವೇಳೆ ಮೂರು ಕೋಲ್ಕತ್ತಾದಲ್ಲಿ ಹಾಗೂ ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿತ್ತು. ಬಾಂಗ್ಲಾ ಟಿ20 ವಿಶ್ವಕಪ್ನಲ್ಲಿ ಆಡಲು ಭಾರತಕ್ಕೆ ಬರಲು ನಿರಾಕರಿಸಿತ್ತು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವರದಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಭಾರತದಲ್ಲಿ ಹಲವು ಸಂಘಟನೆಗಳು ಹಾಗೂ ರಾಜಕೀಯ ಸಂಸ್ಥೆಗಳು ಐಪಿಎಲ್ನಲ್ಲಿ ಬಾಂಗ್ಲಾದೇಶದ ಆಟಗಾರರಿಗೆ ಐಪಿಎಲ್ನಲ್ಲಿ ಆಡದಂತೆ ಒತ್ತಡ ಹೆಚ್ಚಾದವು. ಈ ಬೆನ್ನಲ್ಲೆ ಬಿಸಿಸಿಐ ಸಹ ದೊಡ್ಡ ನಿರ್ಧಾರ ಕೈಗೊಂಡಿತು.