
ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಇನ್ನು ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಆದರೆ ಟಿ20 ವಿಶ್ವಕಪ್ ಆರಂಭವಾದ ನಂತರ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆರಂಭಿಸುವ ನಿರೀಕ್ಷೆಯನ್ನು ಮ್ಯಾನೇಜ್ಮೆಂಟ್ ಹೊಂದಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಕಳೆದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೂಡ ಬೌಲಿಂಗ್ ನಡೆಸಿರಲಿಲ್ಲ.
ಕುತೂಹಲಕಾರಿ ಸಂಗತಿಯೆಂದರೆ ಹಾರ್ದಿಕ್ ಪಾಂಡ್ಯ ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೌಲಿಂಗ್ ನಡೆಸಿದ್ದರು. ಆದರೆ ಯುಎಇನಲ್ಲಿ ನಡೆದ ಐಪಿಎಲ್ ಎರಡನೇ ಚರಣದ ಪಂದ್ಯದಲ್ಲಿ ಹಾರ್ದಿಕ್ ಸ್ಪೆಲಿಸ್ಟ್ ಬ್ಯಾಟರ್ ಮಾತ್ರವೇ ಆಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ ತಂಡ ಆರನೇ ಬೌಲರ್ಅನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಲಿದೆ ಎಂದಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಕೆಲ ಪ್ರಯೋಗಗಳನ್ನು ನಡೆಸುವ ಬಗ್ಗೆಯೂ ರೋಹಿತ್ ಶರ್ಮಾ ಮಾಹಿತಿ ನೀಡಿದರು. ಇದರ ಭಾಗವಾಗಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ದಾಳಿಗಿಳಿದಿದ್ದಾರೆ.
"ಹಾರ್ದಿಕ್ ಪಾಂಡ್ಯ ಚೇತರಿಕೆ ಉತ್ತಮವಾಗಿದೆ. ಆದರೆ ಅವರು ಬೌಲಿಂಗ್ ನಡೆಸಲು ಇನ್ನು ಕೂಡ ಕೆಲ ಕಾಲ ತೆಗೆದುಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಅವರು ಹೆಚ್ಚು ಬೌಲಿಂಗ್ ನಡೆಸಿಲ್ಲ. ಇಂತಾ ಟೂರ್ನಮೆಂಟ್ಗಳಲ್ಲಿ ನೀವು ಆಡುವಾಗ ಸಂಪೂರ್ಣವಾಗಿ ಫಿಟ್ ಆಗಿರಬೇಕಾಗುತ್ತದೆ. ನೂರು ಪ್ರತಿಶತಕ್ಕಿಂತಲೂ ಹೆಚ್ಚು ಸಶಕ್ತರಾಗಿರಬೇಕಾಗುತ್ತದೆ. ಅವರು ಈಗ ಅದನ್ನು ಸಾಧಿಸುವತ್ತ ಗಮನಹರಿಸಿದ್ದಾರೆ. ಅವರು ಇನ್ನು ಕೂಡ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿಲ್ಲ. ಆದರೆ ಕೆಲ ದಿನಗಳಲ್ಲಿಯೇ ಅವರು ಬೌಲಿಂಗ್ ಅಭ್ಯಾಸವನ್ನು ನಡೆಸುವ ಸಾಧ್ಯತೆಯಿದೆ. ವಿಶ್ವಕಪ್ ಆರಂಭದ ಬಳಿಕ ಅವರು ಯಾವ ಕ್ಷಣದಲ್ಲಿ ಬೇಕಾದರೂ ಸಂಪೂರ್ಣವಾಗಿ ಸಿದ್ಧವಾಗಬಹುದು" ಎಂದಿದ್ದಾರೆ ರೋಹಿತ್ ಶರ್ಮಾ.
ಇನ್ನು ಈ ಸಂದರ್ಭದಲ್ಲಿ ಆರನೇ ಬೌಲಿಂಗ್ ಆಯ್ಕೆಯಾಗಿ ಸ್ವತಃ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಬೌಲಿಂಗ್ ನಡೆಸಿ ಆರನೇ ಬೌಲಿಂಗ್ ಆಯ್ಕೆಯಾಗಿ ಯಾರಾಗಬಹುದು ಎಂಬ ಹುಡುಕಾಟ ನಡೆಸುವುದಾಗಿಯೂ ರೋಹಿತ್ ಶರ್ಮಾ ಹೇಳಿದ್ದಾರೆ. ಆದರೆ ಆರನೇ ಬೌಲರ್ ಬಗ್ಗೆ ತಾವಿ ಹೆಚ್ಚಾಗಿ ಕಳವಳಗೊಂಡಿಲ್ಲ ಎಂಬುದನ್ನು ಕೂಡ ರೋಹಿತ್ ಶರ್ಮಾ ತಿಳಿಸಿದ್ದಾರೆ. ಆದರೆ ಆರನೇ ಬೌಲರ್ನ ಆಯ್ಕೆ ಸಿದ್ಧವಿದ್ದರೆ ಯಾವುದಾದರೂ ಬೌಲರ್ ಹೆಚ್ಚಾಗಿ ದಂಡಿಸಲ್ಪಟ್ಟರೆ ಅಂತಾ ಸಂದರ್ಭದಲ್ಲಿ ಬೌಲಿಂಗ್ ವಿಭಾಗಕ್ಕೆ ಸಹಕಾರಿಯಾಗಲಿದೆ. ಸುದೀರ್ಘ ಮಾದರಿಯ ಟೂರ್ನಿಗಳಲ್ಲಿ ಇಂತಾ ಆಯ್ಕೆಗಳು ಇದ್ದಾಗ ಸಹಕಾರಿಯಾಗುತ್ತದೆ ಎಂದಿದ್ದಾರೆ ರೋಹಿತ್ ಶರ್ಮಾ.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟಾಸ್ ಪ್ರಕ್ರಿಯೆಗೆ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಇಳಿದಿದ್ದರು. ಈ ಮೂಲಕ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಉಪಸ್ಥಿತಿಯಲ್ಲಿಯೇ ರೋಹಿತ್ ಶರ್ಮಾ ನಾಯಕನಾಗಿ ಮುನ್ನಡೆಸಿದ್ದಾರೆ. ಮ್ಯಾನೇಜ್ಮೆಂಟ್ನ ಈ ನಡೆ ಕೂಡ ಕುತೂಹಲ ಮೂಡಿಸಿದೆ.
ಭಾರತ ತಂಡ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್ ; ಮಾರ್ಗದರ್ಶಕ: ಎಂಎಸ್ ಧೋನಿ