
ಲೀಡ್ಸ್, ಜುಲೈ 07: ಹೆಡಿಂಗ್ಲೆ ಮೈದಾನದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಕೊನೆಯ ಲೀಗ್ ಪಂದ್ಯದ ವೇಳೆ ಮೈದಾನದ ಮೇಲೆ ಅಪರಿಚಿತ ಪುಟ್ಟ ವಿಮಾನಗಳು ಹಾರಾಡಿದ ಘಟನೆ ನಡೆದಿದೆ. ಇದಲ್ಲದೆ, ವಿಮಾನದ ಹಾರಾಟದ ಜೊತೆಗೆ ಭಾರತ ವಿರೋಧಿ ಹೇಳಿಕೆ ಇದ್ದ ಬ್ಯಾನರ್ ಆಗಸದಲ್ಲಿ ಕಾಣಿಸಿಕೊಂಡಿದೆ. ಈ ಕುರಿತಂತೆ ಕ್ರಮ ಜರುಗಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೂರು ನೀಡಿದೆ.
ಪಂದ್ಯ ಆರಂಭವಾದ ಕೆಲ ಕ್ಷಣಗಳ ಬಳಿಕ 'ಜಸ್ಟಿಸ್ ಫಾರ್ ಕಾಶ್ಮೀರ್' ಎಂಬ ಬ್ಯಾನರ್ ಹೊಂದಿದ್ದ ವಿಮಾನ ಹಾರಾಟ ಕಂಡು ಬಂದಿತ್ತು. ಇದಾದ ಅರ್ಧ ಗಂಟೆ ಬಳಿಕ 'India Stop Genicide, Free Kashmir' ಎಂಬ ಬ್ಯಾನರ್ ಇದ್ದ ವಿಮಾನ ಕಂಡು ಬಂದಿದೆ.
ಕಳೆದ 10 ದಿನಗಳಲ್ಲಿ ಈ ರೀತಿ ಘಟನೆ ನಡೆದಿರುವುದು ಇದು ಎರಡನೇ ಬಾರಿಯಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಅಭಿಮಾನಿಗಳು ಜೂನ್ 29ರಂದು ನಡೆದ ಪಂದ್ಯದ ವೇಳೆ ಮೈದಾನದ ಹೊರಗಡೆ ಕಿತ್ತಾಡಿಕೊಂಡಿದ್ದರು. 'ಬಲೂಚಿಸ್ತಾನಕ್ಕೆ ನ್ಯಾಯ ಸಿಗಲಿ' ಎಂಬ ಬ್ಯಾನರ್ ಕೂಡಾ ಬ್ರಾಡ್ ಫರ್ಡ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿತ್ತು.
ರಾಜಕೀಯ ಹಾಗೂ ವರ್ಣಬೇಧ ನೀತಿ ವಿರುದ್ಧ ಐಸಿಸಿ ಕಠಿಣ ನಿಯಮಾವಳಿ ಹೊಂದಿದೆ. ಯಾರ್ಕ್ ಷೈರ್ ನಲ್ಲಿ ಭಾರತ ಉಪಖಂಡಕ್ಕೆ ಸೇರಿದವರು ಹೆಚ್ಚಾಗಿ ವಾಸಿಸುತ್ತಾರೆ. ಹೀಗಾಗಿ, ರಾಜಕೀಯ ಪ್ರೇರಿತ ಗಲಭೆಗಳು ನಿರೀಕ್ಷಿತವಾಗಿದೆ. ಆದರೆ, ಈ ರೀತಿ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.