
ನವದೆಹಲಿ, ಏಪ್ರಿಲ್ 18: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಪ್ರಕಾರ ಬಿಸಿಸಿಐ ಪ್ರಕಟಿಸಿರುವ ಭಾರತ ವಿಶ್ವಕಪ್ ತಂಡದಲ್ಲಿ ನಾಲ್ಕನೇ ವೇಗಿಯ ಸ್ಥಾನ ಕೊರತೆಯಾಗಿದೆಯಂತೆ. ಹೀಗೆಂದು ಗಂಭೀರ್ ಅವರೇ ಹೇಳಿಕೊಂಡಿದ್ದಾರೆ. ಭಾರತ ತಂಡದಲ್ಲಿ ನಾಲ್ಕನೇ ವೇಗಿಯೊಬ್ಬ ಇರಬೇಕಿತ್ತು ಎಂಬ ಅಭಿಪ್ರಾಯವನ್ನು ಗಂಭೀರ್ ಹೊರಹಾಕಿದ್ದಾರೆ.
'ತಂಡದಲ್ಲಿ ಏನೋ ಒಂದು ಕೊರತೆಯಾಗಿದೆ ಅನ್ನಿಸಿದರೆ ಅದು ನಾಲ್ಕನೇ ವೇಗಿ. ವಿಶ್ವಕಪ್ ಒಂದು ಪ್ರತಿಷ್ಠಿತ ಟೂರ್ನಿ. ಆದರೆ ನಾವು ತಂಡದಲ್ಲಿ ಮೂರೇ ವೇಗಿಗಳನ್ನು ಹೊಂದಿದ್ದೇವೆ. ಹಾರ್ದಿಕ್ (ಪಾಂಡ್ಯ) ಮತ್ತು ವಿಜಯ್ (ಶಂಕರ್) ಇಬ್ಬರೂ ಆಲ್ ರೌಂಡರ್. ಹೀಗಾಗಿ ನಾಲ್ಕನೇ ವೇಗಿಯ ಸ್ಥಾನ ಬೆಂಬಲಿಸಲು ಒಬ್ಬ ಬೇಕಿತ್ತು' ಎಂದು ಗಂಭೀರ್ ಹೇಳಿದ್ದಾರೆ.
ಇಂಗ್ಲೆಂಡ್ ಸಂದರ್ಭಗಳನ್ನು ತಲೆಯಲ್ಲಿಟ್ಟುಕೊಂಡರೆ, ಟೂರ್ನಿಯಲ್ಲಿ ಭಾರತ ತಂಡವನ್ನು ಈ ಕೊರತೆ ಕಾಡಲಿದೆ ಎಂದಿರುವ ಗಂಭೀರ್, 'ಇದೇ ಕಾರಣಕ್ಕೆ ವಿಶ್ವಕಪ್ಗೆ ನನ್ನ ನೆಚ್ಚಿನ ತಂಡ ಆರಿಸುವಾಗ ನಾನು ನವದೀಪ್ ಸೈನಿಯನ್ನು ನಾಲ್ಕನೇ ವೇಗಿಯಾಗಿ ಆರಿಸಿದ್ದೆ' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಗಂಭೀರ್ ಹೇಳುತ್ತಿರುವ ಮೂವರು ವೇಗಿಗಳೆಂದರೆ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ. ಆದರೆ ತಂಡದ ಒಟ್ಟಾರೆ ಅಭಿಪ್ರಾಯ ತಿಳಿಸುತ್ತ ಗಂಭೀರ್ ಈ ಬಾರಿ ತಂಡ 2011ರ ತಂಡಕ್ಕಿಂತ ಉತ್ತಮವಾಗಿದೆ. ಅಲ್ಲದೆ ಬೌಲಿಂಗ್ ವಿಭಾಗ 2011 ಮತ್ತು 2015ಕ್ಕಿಂತ ಎಷ್ಟೋ ಪರವಾಗಿಲ್ಲ ಎಂದು ಹೇಳಿದ್ದಾರೆ.