
ನವದೆಹಲಿ, ಏಪ್ರಿಲ್ 14: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸದ್ಯದ ಭಾರತದ ವೇಗದ ಬೌಲಿಂಗ್ ವಿಭಾಗ ಅದ್ಭುತ ವಾಗಿದೆ ಎಂದಿದ್ದಾರೆ. ಜೊತೆಗೆ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಈ ಸಾರಿಯ ವಿಶ್ವಕಪ್ನಲ್ಲಿ ಭಾರತ ತಂಡದ ಪರ ಪ್ರಮುಖ ಪಾತ್ರ ವಹಿಸಲಿರುವುದಾಗಿ ಅಭಿಪ್ರಾಯಿಸಿದ್ದಾರೆ.
'ಭಾರತದ ವೇಗದ ಬೌಲಿಂಗ್ ವಿಭಾಗ ಚೆನ್ನಾಗಿದೆ. ಶಮಿ ಮತ್ತು ಬೂಮ್ರಾ ಇಬ್ಬರೂ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ' ಎಂದು ದಾದಾ ಹೇಳಿದ್ದಾರೆ. ಗಂಗೂಲಿ ಪ್ರಕಾರ ಭುವನೇಶ್ವರ್ ಕುಮಾರ್ ಬಳಿಕ ಉಮೇಶ್ ಯಾದವ್ ಭಾರತ ವಿಶ್ವಕಪ್ ತಂಡದ ನಾಲ್ಕನೇ ವೇಗಿಯಾಗಿ ಕಾಣಿಸಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಮೇ 30ರಿಂದ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿರಬೇಕಾದ ಆಟಗಾರರನ್ನು ಸೌರವ್ ಆರಿಸಿದ್ದಾರೆ. ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕಾದಾಡಲಿವೆ.
ಗಂಗೂಲಿಯ ನೆಚ್ಚಿನ ಭಾರತ ವಿಶ್ವಕಪ್ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ ಕುಮಾರ್ ಮತ್ತು ಉಮೇಶ್ ಯಾದವ್.