
ಲಂಡನ್, ಮೇ 25: ಭಾರತ ಕ್ರಿಕೆಟ್ ತಂಡ ನಿರ್ವಹಣಾ ಸಮಿತಿ ಕೊಂಚ ನಿರಾಳವಾಗುವ ವಿಚಾರ ಕೇಳಿ ಬಂದಿದೆ. ಅಭ್ಯಾಸದ ವೇಳೆ ಗಾಯಕ್ಕೀಡಾಗಿದ್ದ ಟೀಮ್ ಇಂಡಿಯಾದ ಆಲ್ ರೌಂಡರ್ ವಿಜಯ್ ಶಂಕರ್ ಅವರ ಕೈ ಯಾವುದೇ ರೀತಿಯ ಮೂಳೆ ಮುರಿತಕ್ಕೆ ಒಳಗಾಗಿಲ್ಲ ಎಂದು ಬಿಸಿಸಿಐ ಹೇಳಿದೆ.
ಶುಕ್ರವಾರ (ಮೇ 24) ವಾರ್ಮ್ ಅಪ್ ವೇಳೆ ವಿಜಯ್ ಶಂಕರ್ ಬಲಗೈ ಮುಂದೋಳಿಗೆ ಗಾಯವಾಗಿತ್ತು. ಶನಿವಾರ ವಿಜಯ್ (ಮೇ 25) ಸ್ಕ್ಯಾನ್ ಮಾಡಿಸಿಕೊಂಡಿದ್ದು, ಯಾವುದೇ ರೀತಿಯ ಮೂಳೆ ಮುರಿತವಾಗಿಲ್ಲವೆಂದು ಸ್ಕ್ಯಾನಿಂಗ್ ವರದಿಯಲ್ಲಿ ತಿಳಿದು ಬಂದಿದೆ ಎಂದು ಬಿಸಿಸಿಐ ತಿಳಿಸಿದೆ.
'ವಿಜಯ್ ಶಂಕರ್ ಅವರು ಶುಕ್ರವಾರ ಬಲಗೈ ಮುಂದೋಳಿಗೆ ಗಾಯ ಮಾಡಿಕೊಂಡಿದ್ದರು. ಸ್ಕ್ಯಾನ್ನಲ್ಲಿ ಮುರಿತವೇನೂ ಕಂಡು ಬಂದಿಲ್ಲ. ವಿಜಯ್ ಚೇತರಿಕೆಗೆ ಬೇಕಾದ ನೆರವನ್ನು ಬಿಸಿಸಿಐ ಮೆಡಿಕಲ್ ತಂಡ ನೀಡುತ್ತಿದೆ' ಎಂದು ಬಿಸಿಸಿಐ ಮಾಹಿತಿ ನೀಡಿದೆ. ಗಾಯಗೊಂಡಿದ್ದರಿಂದ ವಿಜಯ್, ಶನಿವಾರ (ಮೇ 25) ನ್ಯೂಜಿಲ್ಯಾಂಡ್ ವಿರುದ್ಧದ ವಾರ್ಮ್ ಅಪ್ ಪಂದ್ಯದಲ್ಲಿ ಆಡಿರಲಿಲ್ಲ.
ಭಾರತ ವಿಶ್ವಕಪ್ ತಂಡದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನಂ.1 ಆಯ್ಕೆಯ ಬ್ಯಾಟ್ಸ್ಮನ್ ಆಗಿ ವಿಜಯ್ ಶಂಕರ್ ಗುರುತಿಸಿಕೊಂಡಿದ್ದಾರೆ. ಜೂನ್ 5ರಂದು ದಕ್ಷಿಣ ಆಫ್ರಿಕಾ vs ಭಾರತ ವಿಶ್ವಕಪ್ ಪಂದ್ಯದಲ್ಲಿ ವಿಜಯ್ ಶಂಕರ್ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ. ಮೇ 30ರಿಂದ ವಿಶ್ವಕಪ್ ಪಂದ್ಯಾಟ ಚಾಲನೆಗೊಳ್ಳಲಿದೆ.