
ಲಂಡನ್, ಮೇ 25: ಐಸಿಸಿ ವಿಶ್ವಕಪ್ ಕ್ರಿಕೆಟ್ 2019ಕ್ಕೆ ಭಾರತ ತಂಡದಲ್ಲಿ ತನ್ನ ಬದಲಿಗೆ ಆಲ್ ರೌಂಡರ್ ವಿಜಯ್ ಶಂಕರ್ಗೆ ಸ್ಥಾನ ನೀಡಿದ್ದಕ್ಕಾಗಿ ಅಂಬಾಟಿ ರಾಯುಡು ಅಸಮಾಧಾನ ತೋರಿಕೊಂಡಿದ್ದರು. ಈ ಬಾರಿಯ ವಿಶ್ವಕಪ್ ನೋಡಲು ನಾನು ತ್ರೀ-ಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ ಎಂದು ಹಿಂದೆ ರಾಯುಡು ಟ್ವೀಟ್ ಮಾಡಿದ್ದರು. ಇದಕ್ಕೆ ವಿಜಯ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.
ಗೌರವ್ ಕಪೂರ್ ಅವರ ಜನಪ್ರಿಯ ಯೂಟ್ಯೂಬ್ ಶೋ ಒಂದರಲ್ಲಿ ಮಾತನಾಡಿದ ವಿಜಯ್ ಶಂಕರ್, 'ಪ್ರಮುಖ ಟೂರ್ನಿಯೊಂದರಿಂದ ಕೈ ಬಿಟ್ಟಾಗ ಕ್ರಿಕೆಟ್ ಆಟಗಾರರು ಅನುಭವಿಸುವ ನೋವು ಏನೆಂದು ನನಗೆ ಗೊತ್ತು. ಹಾಗಾಗಿ ಆ ಟ್ವೀಟ್ ನನ್ನನ್ನೇ ಗುರಿಯಾಗಿಸಿ ಮಾಡಿದ್ದು ಅಂತ ನನಗನ್ನಿಸುತ್ತಿಲ್ಲ' ಎಂದರು.
'ನಾನೊಬ್ಬ ಕ್ರಿಕೆಟರ್ ಆಗಿ ತಂಡದಲ್ಲಿ ಆರಿಸದಿದ್ದಾಗ ಕ್ರಿಕೆಟಿಗರಲ್ಲಾಗುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಹಾಗಾಗಿ ಆ ಟ್ವೀಟ್ ನನ್ನನ್ನು ನೋಯಿಸುವುಕ್ಕೆ ಮಾಡಿದ್ದಲ್ಲ ಅಂತ ನಾನಂದುಕೊಳ್ಳುತ್ತೇನೆ. ಬದಲಿಗೆ ಅದು ಆ ಕ್ಷಣದ ಭಾವನಾತ್ಮಕ ಪ್ರತಿಕ್ರಿಯೆಯಷ್ಟೇ' ಎಂದಿದ್ದಾರೆ.
ವಿಶ್ವಕಪ್ಗಾಗಿ 15 ಜನರ ಭಾರತ ತಂಡದಲ್ಲಿ ತನ್ನನ್ನು ಸೇರಿಸದಿದ್ದಾಗ ರಾಯುಡು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ತಂಡದಲ್ಲಿ ಶಂಕರ್ ಅವರನ್ನು ಹೆಸರಿಸುವಾಗ ಬಿಸಿಸಿಐ ವಿಜಯ್ ಒಬ್ಬ ತ್ರೀ-ಡೈಮೆನ್ಶನಲ್ (ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್) ಆಟಗಾರ. ಅದಕ್ಕೇ ಅವರನ್ನು ಆರಿಸಿದ್ದೇವೆ ಎಂದಿತ್ತು. ಹೀಗಾಗಿ ರಾಯುಡು 'ತ್ರೀ-ಡಿ'ಯನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.