
ನವದೆಹಲಿ, ಮೇ 27: ಯುವರಾಜ್ ಸಿಂಗ್ ಒಳ್ಳೆಯ ಮೂಡ್ನಲ್ಲಿದ್ದರೆ ಮುಗೀತು; ಅವತ್ತಿನ ಪಂದ್ಯ ರೋಮಾಂಚಕ ಅನ್ನಿಸುತ್ತಿತ್ತು. ಟೀಮ್ ಇಂಡಿಯಾದಲ್ಲಿ ಪ್ರಮುಖಾಕರ್ಷಣಿಯ ಆಟಗಾರನಾಗಿ ಮೈದಾನಕ್ಕಿಳಿಯುತ್ತಿದ್ದ ಯುವಿ ಈ ಬಾರಿ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸುವ ತಂಡಗಳನ್ನು ಆರಿಸಿದ್ದಾರೆ. ಭಾರತ ತಂಡದ ವಿಶೇಷ ಅಂಶಗಳ ಬಗ್ಗೆಯೂ ವಿಚಾರಗಳನ್ನು ಹರವಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
'ನನಗನ್ನಿಸುವಂತೆ ಭಾರತ ಮತ್ತು ಇಂಗ್ಲೆಂಡ್ ತಂಡಕ್ಕೆ ಫೈನಲ್ ಪ್ರವೇಶಿಸುವ ಒಳ್ಳೆಯ ಅವಕಾಶವಿದೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ತಂಡ ಸೇರಿಕೊಂಡಿರುವುದರಿಂದ ಆಸ್ಟ್ರೇಲಿಯಾ ಕೂಡ ಫೈನಲ್ ನಿಟ್ಟಿನಲ್ಲಿ ಭರ್ಜರಿ ಪೈಪೋಟಿ ನೀಡಬಲ್ಲದು. ನನ್ನ ಪ್ರಕಾರ ಈ ಮೂರು ತಂಡಗಳಂತೂ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿವೆ' ಎಂದು ಯುವರಾಜ್ ಹೇಳಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅವಿಸ್ಮರಣೀಯ ಅನ್ನಿಸಿರುವ 2011ರ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಕೊಡುಗೆ ಪ್ರಮುಖವಾಗಿತ್ತು. ಟೂರ್ನಿಯಲ್ಲಿ ಯುವಿ 1 ಶತಕ, 4 ಅರ್ಧ ಶತಕ ಸೇರಿ ಒಟ್ಟು 362 ರನ್ ಕಲೆ ಹಾಕಿದ್ದರು. 15 ವಿಕೆಟ್ಗಳನ್ನೂ ಪಡೆದುಕೊಂಡಿದ್ದರು. ಅಲ್ಲದೆ 4 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನೂ ಗೆದ್ದಿದ್ದ ಭಾರತದ ಹೆಮ್ಮೆಯ ಅಟಗಾರ ಯುವಿ.
ಇನ್ನು ಟೀಮ್ ಇಂಡಿಯಾದ ವೈಶಿಷ್ಟ್ಯದ ಬಗ್ಗೆ ಮಾತನಾಡುತ್ತ ಯುವರಾಜ್, 'ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರೋದರಿಂದ ಇದೊಂದು ಉತ್ತಮ ಟೂರ್ನಿ ಅನ್ನಿಸಲಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ಪ್ರತಿಭೆಯೆನಿಸಲಿದ್ದಾರೆ. ಪಾಂಡ್ಯ ಉತ್ತಮ ಫಾರ್ಮ್ನಲ್ಲೂ ಇರೋದ್ದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ' ಎಂದರು.