ಭಾನುವಾರ, ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಗೆಲುವಿಗೆ ಈ ಅಂಪೈರ್ ಮತ್ತೊಮ್ಮೆ ಅಡ್ಡಗೋಡೆಯಾಗಿ ನಿಂತ ಘಟನೆ ನಡೆಯಿತು.
ಫೈನಲ್ ಪಂದ್ಯಕ್ಕೆ ಆನ್-ಫೀಲ್ಡ್ ಅಂಪೈರ್ ಆಗಿದ್ದ ಇಂಗ್ಲೆಂಡ್ನ ರಿಚರ್ಡ್ ಕೆಟಲ್ಬರೋ ಭಾರತದ ವಿಶ್ವಕಪ್ ಗೆಲುವಿಗೆ ತಡೆಗೋಡೆಯಾದರು. ಈತ ಐಸಿಸಿ ಟೂರ್ನಿಯ ಪ್ರಮುಖ ಪಂದ್ಯಗಳಲ್ಲಿ ಅಂಪೈರ್ ಆಗಿ ನಿಂತಾಗಲೆಲ್ಲ ಭಾರತಕ್ಕೆ ಸೋಲು ಖಚಿತವಾಗಿರುತ್ತದೆ.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪ್ರಶಸ್ತಿ ಹಣಾಹಣಿಯಲ್ಲಿ ರಿಚರ್ಡ್ ಇಲ್ಲಿಂಗ್ವರ್ತ್ ಮತ್ತು ರಿಚರ್ಡ್ ಕೆಟಲ್ಬರೋ ಅವರನ್ನು ಆನ್-ಫೀಲ್ಡ್ ಅಂಪೈರ್ಗಳಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಹೆಸರಿಸಿತು.
2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಎರಡು ದಿನಗಳ ಮುನ್ನ ಇಂಗ್ಲೆಂಡ್ನ ರಿಚರ್ಡ್ ಇಲ್ಲಿಂಗ್ವರ್ತ್ ಮತ್ತು ರಿಚರ್ಡ್ ಕೆಟಲ್ಬರೋ ಆನ್-ಫೀಲ್ಡ್ ಅಂಪೈರ್ಗಳಾಗಿ ಆಯ್ಕೆಯಾದರು. 2015ರ ವಿಶ್ವಕಪ್ನ ಫೈನಲ್ನಲ್ಲಿದ್ದ ರಿಚರ್ಡ್ ಕೆಟಲ್ಬರೋಗೆ ಇದು ಎರಡನೇ ಫೈನಲ್ ಪಂದ್ಯವಾಗಿದೆ.
ರಿಚರ್ಡ್ ಇಲ್ಲಿಂಗ್ವರ್ತ್ಗೆ ಇದು ಎರಡನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. ಆದರೂ ಪಂದ್ಯದ ಅಂಪೈರ್ ಆಗಿ ಅವರ ಮೊದಲನೇ ಪಂದ್ಯವಾಗಿದೆ ಎಂದು ಐಸಿಸಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

2014ರಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಸೋತ ಟಿ20 ವಿಶ್ವಕಪ್ನ ಫೈನಲ್ ಸೇರಿದಂತೆ ನಾಕ್ಔಟ್ ಸುತ್ತಿನಲ್ಲಿ ಭಾರತವು ಸೋತ ಎಲ್ಲಾ ಹಿಂದಿನ ಐಸಿಸಿ ಟೂರ್ನಿಗಳಲ್ಲಿ ರಿಚರ್ಡ್ ಕೆಟಲ್ಬರೋ ಅಂಪೈರ್ಗಳಾಗಿದ್ದರು.
2013ರಿಂದ ಭಾರತವು 10 ಐಸಿಸಿ ಪಂದ್ಯಾವಳಿಗಳನ್ನು ಕಳೆದುಕೊಂಡಿದೆ ಮತ್ತು 10ರಲ್ಲಿ 8 ಬಾರಿ "ರಿಚರ್ಡ್ ಕೆಟಲ್ಬರೋ' ಫೀಲ್ಡ್ ಅಥವಾ ಟಿವಿ ಅಂಪೈರ್ ಆಗಿದ್ದರು ಎಂಬುದು ಗಮನಾರ್ಹ.
2015ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತು. 2016ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತು.
2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತಿತು ಮತ್ತು 2019ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತು.
ಇದೀಗ 2023ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಅನುಭವಿಸಿ ವಿಶ್ವಕಪ್ ಕನಸು ಭಗ್ನಗೊಂಡಿತು. ನಾಕೌಟ್ ಪಂದ್ಯದಲ್ಲಿ ರಿಚರ್ಡ್ ಕೆಟಲ್ಬರೋ ಅಂಪೈರ್ ಆಗಿ ನಿಂತಿದ್ದರೆ ಭಾರತ ತಂಡಕ್ಕೆ ಸೋಲು ಖಚಿತ ಎಂಬ ಮಾತು ಕೇಳಿಬರುತ್ತಿದೆ.
ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಎಲ್ಬಿಡಬ್ಲ್ಯು ಔಟ್ಗೆ ಮನವಿ ಮಾಡಲಾಯಿತು. ಆದರೆ ರಿಚರ್ಡ್ ಕೆಟಲ್ಬರೋ ಅವರು ಭಾರತ ತಂಡದ ಆಟಗಾರರ ಮನವಿಗೆ ಸೊಪ್ಪು ಹಾಕದೆ ನಾಟೌಟ್ ನೀಡಿದರು. ಆ ಬಳಿಕ ಭಾರತ ತಂಡದ ನಾಯಕ ರಿವ್ಯೂ ಮೊರೆ ಹೋದರು.
ಮರು ವೀಕ್ಷಣೆಯಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಎಲ್ಬಿಡಬ್ಲ್ಯು ಮನವಿ ಅಂಪೈರ್ಸ್ ಕಾಲ್ ಎಂದು ಸೂಚಿಸಿತು. ಇದು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸೇರಿದಂತೆ ಭಾರತೀಯ ಆಟಗಾರರು ಮತ್ತು ಕೋಟ್ಯಂತರ ಭಾರತೀಯ ಅಭಿಮಾನಿಗಳ ನಿರಾಸೆ ಮತ್ತು ಕೋಪಕ್ಕೆ ಕಾರಣವಾಯಿತು.
ಇಲ್ಲಿ ಅಂಪೈರ್ ರಿಚರ್ಡ್ ಕೆಟಲ್ಬರೋ ಔಟ್ ನೀಡಿದ್ದರೆ ವಿಕೆಟ್ ಬೀಳುತ್ತಿತ್ತು ಮತ್ತು ಅದು ಭಾರತ ತಂಡಕ್ಕೆ ವರದಾನವಾಗಬಹುದಿತ್ತು. 12 ವರ್ಷಗಳ ನಂತರ ಭಾರತದ ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶವಿತ್ತು.