World Cup 2023: ಭಾರತ ತಂಡದ ವಿಶ್ವಕಪ್ ಸೋಲಿಗೆ ಇದೇ ಪ್ರಮುಖ ಕಾರಣವೆಂದ ನಾಸೆರ್ ಹುಸೇನ್!
ಭಾನುವಾರ, ನವೆಂಬರ್ 16ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್ಗಳ ಅಂತರದ ಗೆಲುವು ಗಳಿಸುತ್ತಿದ್ದಂತೆಯೇ ಕೋಟ್ಯಂತರ ಭಾರತೀಯರ ಹೃದಯ ವಿದ್ರಾವಕಗೊಳಿಸಿತು.
140 ಕೋಟಿ ಭಾರತೀಯರ ಅಪಾರ ನಿರೀಕ್ಷೆ ಹೊತ್ತಿದ್ದ ಭಾರತ ಕ್ರಿಕೆಟ್ ತಂಡ ತಮ್ಮ ಮೂರನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಸನಿಹದಲ್ಲಿದ್ದಾಗ ಎಡವಿದರು. ಇನ್ನು ಆಸ್ಟ್ರೇಲಿಯಾ ತಂಡ ತಮ್ಮ 6ನೇ ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ದಾಖಲೆಯನ್ನು ವಿಸ್ತರಿಸಿತು.

ಇದೀಗ 2023ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ಗಳಿಂದ ಭಾರತ ಸೋತಿದ್ದಕ್ಕೆ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ನಾಸೆರ್ ಹುಸೇನ್ ಪ್ರಮುಖ ಕಾರಣ ತಿಳಿಸಿದ್ದಾರೆ. ಭಾರತದ ಬಾಲಂಗೋಚಿಗಳು ಉತ್ತಮ ಬ್ಯಾಟಿಂಗ್ ಮಾಡದಿರುವುದು ಸೋಲಿಗೆ ಒಂದು ಕಾರಣ ಎಂದು ನಾಸೆರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಫೈನಲ್ಗೆ ಪ್ರವೇಶಿಸುವ ಮುನ್ನ ಅಜೇಯ ದಾಖಲೆಯೊಂದಿಗೆ ಪಂದ್ಯಾವಳಿಯುದ್ದಕ್ಕೂ ಪ್ರಬಲ ತಂಡವಾಗಿದ್ದ ಭಾರತ ತಂಡ ನಿರ್ಣಾಯಕ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ಬೌಲರ್ಗಳಿಗೆ ಅನುಕೂಲಕರವಾದ ನಿಧಾನಗತಿಯ ಪಿಚ್ನಲ್ಲಿ ರನ್ ವೇಗವನ್ನು ಪಡೆಯಲು ಭಾರತೀಯ ಬ್ಯಾಟಿಂಗ್ ಲೈನ್ಅಪ್ ಹೆಣಗಾಡಿತು.
ಭಾರತ ತಂಡದ ಪ್ರಮುಖ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತ್ವರಿತವಾಗಿ ಕಳೆದುಕೊಂಡ ನಂತರ, ಆತಿಥೇಯ ತಂಡ ತಮ್ಮ ಇನ್ನಿಂಗ್ಸ್ನ ಆರಂಭದಲ್ಲಿಯೇ ದೊಡ್ಡ ಹಿನ್ನಡೆ ಅನುಭವಿಸಿತು.
ಒತ್ತಡದ ಪರಿಸ್ಥಿತಿಯ ನಡುವೆಯೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕ್ರಮವಾಗಿ 54 ಮತ್ತು 66 ರನ್ ಗಳಿಸಿ ಅರ್ಧಶತಕಗಳ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾದರು.
ಆದಾಗ್ಯೂ, ಇವರಿಬ್ಬರ ಪ್ರಯತ್ನಗಳು ಭಾರತ ತಂಡವನ್ನು ಸವಾಲಿನ ಮೊತ್ತಕ್ಕೆ ಕೊಂಡೊಯ್ಯಲು ಸಾಕಾಗಲಿಲ್ಲ. ಅಂತಿಮವಾಗಿ ಭಾರತ ತಂಡವು 240 ರನ್ಗಳಿಗೆ ಆಲೌಟ್ ಆಯಿತು.

ನಂತರ 241 ರನ್ಗಳ ಚೇಸಿಂಗ್ನಲ್ಲಿ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಏಳು ಓವರ್ಗಳ ಬಳಿಕ 47 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಟ್ರಾವಿಸ್ ಹೆಡ್ ಅವರ ತಂಡದ ಪರ ವಿಜಯಲಕ್ಷ್ಮಿ ಹಿಂದಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟ್ರಾವಿಸ್ ಹೆಡ್ ಅವರ 137 ರನ್ಗಳ ಅಮೋಘ ಶತಕ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಅಜೇಯ 58 ರನ್ ಆಸ್ಟ್ರೇಲಿಯಾ ಗೆಲುವಿಗೆ ನೆರವಾದರು. ಈ ಜೋಡಿ 4ನೇ ವಿಕೆಟ್ಗೆ 192 ರನ್ಗಳ ಜೊತೆಯಾಟ ನೀಡಿತು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಮುನ್ನಡೆಸಿತು.
ಸ್ಕೈ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸೆರ್ ಹುಸೇನ್, ಭಾರತ ಈಗಲೂ ಶ್ರೇಷ್ಠ ತಂಡವಾಗಿದೆ. ಆದರೆ, ಪಿಚ್ ಪರಿಸ್ಥಿತಿ ಆಸ್ಟ್ರೇಲಿಯಾ ತಂಡವನ್ನು ಮರಳಿ ಆಟಕ್ಕೆ ತಂದಿತು ಎಂದರು.
ಭಾರತದ ಕೆಳ ಕ್ರಮಾಂಕದ ನಾಲ್ವರು ಬೌಲರ್ಗಳು ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರುವುದು, ಫೈನಲ್ನಲ್ಲಿ ಭಾರತ ತಮಡವನ್ನು ಮತ್ತೆ ಕಾಡಿತು. ಇದು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಫೈನಲ್ನಲ್ಲಿ ಅಂಜುಬುರುಕವಾಗಿ ಆಡುವಂತೆ ಪ್ರೇರೇಪಿಸಿತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಹೇಳಿದರು.
"ಭಾರತ ಇನ್ನೂ ಉತ್ತಮ ತಂಡವಾಗಿದೆ. ಆದರೆ ಪಿಚ್ ಆಸ್ಟ್ರೇಲಿಯಾ ತಂಡಕ್ಕೆ ನೆರವಾಯಿತು ಮತ್ತು ಪಂದ್ಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿತು".
"ಭಾರತದ ಕೆಳ ಕ್ರಮಾಂಕದ ಬ್ಯಾಟರ್ಗಳು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರುವುದು ಹಾಗೂ ಬ್ಯಾಟಿಂಗ್ ಡೆಪ್ತ್ ಇಲ್ಲದಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಹೀಗಾಗಿಯೇ ರಾಹುಲ್ ಮತ್ತು ಕೊಹ್ಲಿ ಧೈರ್ಯ ತೋರಿ ಆಡಲು ಸಾಧ್ಯವಾಗಲಿಲ್ಲ. 8, 9, 10 ಮತ್ತು 11ನೇ ಕ್ರಮಾಂಕದ ಬ್ಯಾಟರ್ಗಳು ಭಾರತಕ್ಕೆ ನೆರವಾಗಲಿಲ್ಲ," ಎಂದು ನಾಸೆರ್ ಹುಸೇನ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications