ಗುರುವಾರ, ನವೆಂಬರ್ 9ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ 41ನೇ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಸೆಣಸಾಡುತ್ತಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಹೀಗಾಗಿ ಕುಸಲ್ ಮೆಂಡೀಸ್ ನಾಯಕತ್ವದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಅತ್ಯುತ್ತಮ ರೀತಿಯಲ್ಲಿ ವಿಶ್ವಕಪ್ ಅಭಿಯಾನ ಆರಂಭಿಸಿದ ನ್ಯೂಜಿಲೆಂಡ್ ತಂಡ, ಇದೀಗ ದುರಾದೃಷ್ಟವಾಗಿ ಸೋಲು ಅನುಭವಿಸುತ್ತಿದೆ. ವಿಶ್ವಕಪ್ನ ಸೆಮಿಫೈನಲ್ನಲ್ಲಿ ಅರ್ಹತೆ ಪಡೆಯಲು ಕಿವೀಸ್ ಪಡೆ ಪುಟಿದೇಳಬೇಕಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಸೆಮಿಫೈನಲ್ಗೆ ಎಂಟ್ರಿ ಪಡೆಯಲು ತಮ್ಮ ಕೊನೆಯ ಲೀಗ್ ಪಂದ್ಯಕ್ಕೆ ಮುಂಚಿತವಾಗಿ ನ್ಯೂಜಿಲೆಂಡ್ ತಂಡ ಎಂಟು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಬೀಗುತ್ತಿದೆ. ಇಂದಿನ ಸೋಲು ಅಥವಾ ಪಂದ್ಯ ರದ್ದುಗೊಂಡರೆ ಕಿವೀಸ್ ತಂಡವು ಪಂದ್ಯಾವಳಿಯಿಂದ ಹೊರಬೀಳಲಿದೆ ಎಂಬ ಸತ್ಯದ ಅರಿವಿದೆ.
ಮತ್ತೊಂದೆಡೆ, ಇಂದಿನ ಪಂದ್ಯದಿಂದ ಶ್ರೀಲಂಕಾ ತಂಡಕ್ಕೆ ಈ ವಿಶ್ವಕಪ್ನಲ್ಲಿ ಕಳೆದುಕೊಳ್ಳುವು ಏನೂ ಇಲ್ಲವಾದರೂ, ತಮ್ಮ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಗೌರವ ಸಂಪಾದಿಸಲು ಹೋರಾಡಲಿದೆ. ಅಲ್ಲದೆ, 2025ರ ಚಾಂಪಿಯನ್ಸ್ ಟ್ರೋಪಿ ಪಂದ್ಯಾವಳಿಗೆ ಅರ್ಹತೆ ಪಡೆಯಲು ಶ್ರೀಲಂಕಾ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಲಿದೆ.

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್(ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಶ್ರೀಲಂಕಾ ತಂಡ: ಪಾಥುಮ್ ನಿಸ್ಸಾಂಕ, ಕುಸಾಲ್ ಪೆರೆರಾ, ಕುಸಲ್ ಮೆಂಡಿಸ್(ನಾಯಕ/ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ಚಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ.