ಭಾನುವಾರ, ನವೆಂಬರ್ 19ರಂದು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ತೆರೆಬಿದ್ದಿದ್ದು, ಆತಿಥೇಯ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಐಸಿಸಿ ಟ್ರೋಫಿ ಎತ್ತಿಹಿಡಿದಿದೆ.
1983 ಮತ್ತು 2011ರ ನಂತರ ಮೂರನೇ ಬಾರಿಗೆ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾದ ಕನಸು ನುಚ್ಚುನೂರಾಗಿದ್ದು, ಪ್ರಶಸ್ತಿ ಗೆಲ್ಲುವ ಪಂದ್ಯದಲ್ಲಿ ಎಡವಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇನ್ನು ಅಹಮದಾಬಾದ್ನಲ್ಲಿ 2023ರ ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದರು.

ಭಾರತ ನೀಡಿದ್ದ 241 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 6 ವಿಕೆಟ್ಗಳು ಮತ್ತು 7 ಓವರ್ಗಳು ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಚಾಂಪಿಯನ್ ಪಟ್ಟಕ್ಕೆ ಏರಿತು.
ಭಾರತ ತಂಡ ಸೋಲುತ್ತಿದ್ದಂತೆಯೇ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಿಮ ಹಂತದಲ್ಲಿ ಕಣ್ಣೀರಿಟ್ಟರು ಮತ್ತು ತಂಡದ ಉಳಿದ ಸದಸ್ಯರು ತೀವ್ರ ಭಾವುಕರಾದಂತೆ ಕಾಣುತ್ತಿದ್ದರು.
ಸತತ ಹತ್ತು ಪಂದ್ಯಗಳ ಗೆಲುವಿನ ಹಿನ್ನೆಲೆಯಲ್ಲಿ ಭಾರತ ಫೈನಲ್ಗೆ ಬಂದಿತ್ತು. ಆದರೆ ಆಸ್ಟ್ರೇಲಿಯಾದ ಪ್ರಬಲ ಪ್ರದರ್ಶನದ ಕಾರಣದಿಂದ ತವರಿನ ಅಭಿಮಾನಿಗಳೆದುರು ಫೈನಲ್ನಲ್ಲಿ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದರು.
ಇಡೀ ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ, ಅಂತಿಮ ಪಂದ್ಯದಲ್ಲಿ ಪ್ರಾಬಲ್ಯ ತೋರಿಸಲು ಸಾಧ್ಯವಾಗಲಿಲ್ಲ. ಬೌಲಿಂಗ್ನಲ್ಲಿ ಹತ್ತು ಓವರ್ಗಳ ನಂತರ, ಪಂದ್ಯವು ಬಹುತೇಕ ಕೈತಪ್ಪಿದಂತೆ ತೋರುತ್ತಿತ್ತು.
ನಾಯಕ ರೋಹಿತ್ ಶರ್ಮಾ ಸೇರಿದಂತೆ ಭಾರತ ತಂಡದ ಆಟಗಾರರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಏಕಪಕ್ಷೀಯ ಫೈನಲ್ ಪಂದ್ಯದ ನಂತರ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ರೋಹಿತ್ ಶರ್ಮಾ ಪಡೆ ಕಣ್ಣೀರು ಸುರಿಸಿತು.
ಈ ವೇಳೆ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಟಗಾರರ ನೋವನ್ನು ಹಂಚಿಕೊಳ್ಳಲು ಮತ್ತು ಕೆಲವು ಪ್ರೇರಕ ಮಾತುಗಳನ್ನು ರವಾನಿಸಲು ಆಟಗಾರರ ಕೋಣೆಗೆ ತೆರಳಿದರು.
ಆಲ್ರೌಂಡರ್ ರವೀಂದ್ರ ಜಡೇಜಾ ಈ ಕುರಿತು ಬರೆದುಕೊಂಡಿದ್ದು, "ನಾವು ಉತ್ತಮ ಪಂದ್ಯಾವಳಿಯನ್ನು ಹೊಂದಿದ್ದೇವೆ. ಆದರೆ ನಿನ್ನೆ ಫೈನಲ್ನಲ್ಲಿ ನಾವು ಕಳಪೆ ಆಟಕ್ಕೆ ಕೊನೆಗೊಂಡಿದ್ದೇವೆ. ನಾವೆಲ್ಲರೂ ಎದೆಗುಂದಿದ್ದೇವೆ. ಆದರೆ ನಮ್ಮ ಜನರ ಬೆಂಬಲ ನಮ್ಮನ್ನು ಬಲಿಷ್ಠಗೊಳಿಸುತ್ತದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಭಾರತ ತಂಡ ಫೈನಲ್ನಲ್ಲಿ ಸೋತರೂ, ಪಂದ್ಯಾವಳಿಯುದ್ದಕ್ಕೂ ನೀಡಿದ ಪ್ರದರ್ಶನಕ್ಕೆ ಶ್ಲಾಘಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ತಂಡವು ಟೂರ್ನಿಯುದ್ದಕ್ಕೂ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದಾರೆ.
"ಭಾರತ ತಂಡವು ಅಂತಹ ಎತ್ತರವನ್ನು ತಲುಪಲು ಸಾಕಷ್ಟು ಕಠಿಣ ಪರಿಶ್ರಮ, ಶಿಸ್ತು ತೋರಿಸಿದೆ ಮತ್ತು ವೇಳಾಪಟ್ಟಿಯ ಒಂದು ಕೆಟ್ಟ ದಿನ ಪಂದ್ಯಾವಳಿಯನ್ನು ಕೊನೆಗೊಳಿಸಿತು. ಮೆನ್ ಇನ್ ಬ್ಲೂ ತಂಡದ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ," ಎಂದು ಜಯ್ ಶಾ ತಿಳಿಸಿದ್ದಾರೆ.