ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ನಂತರ, ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
2023ರ ಏಕದಿನ ವಿಶ್ವಕಪ್ ಅಭಿಯಾನದಲ್ಲಿ ಸತತ ಮೂರು ಗೆಲುವು ದಾಖಲಿಸಿದ ನಂತರ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಪೂರ್ವ ಅಭ್ಯಾಸಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭಾನುವಾರ ಅಹಮದಾಬಾದ್ನಿಂದ ನೇರವಾಗಿ ಪುಣೆಗೆ ಆಗಮಿಸಿದೆ.

ಗುರುವಾರ, ಅಕ್ಟೋಬರ್ 19ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನೆರೆಯ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ತಂಡ ಸೆಣಸಾಡಲಿದೆ.
ಭಾರತ ತಂಡದ ಸದಸ್ಯರು ಟರ್ಮಿನಲ್ನಿಂದ ಹೊರ ಬರುತ್ತಿದ್ದಂತೆ, ಪುಣೆಯ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದ ಅನೇಕ ಅಭಿಮಾನಿಗಳು "ಇಂಡಿಯಾ, ಇಂಡಿಯಾ' ಎಂದು ಘೋಷಣೆ ಕೂಗಿ ಸ್ವಾಗತಿಸಿದರು.
ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ರವೀಂದ್ರ ಜಡೇಜಾ, ಬುಮ್ರಾ, ಮೊಹಮ್ಮದ್ ಸಿರಾಜ್, ಶುಭ್ಮನ್ ಗಿಲ್, ಇಶಾನ್ ಕಿಶನ್, ಕುಲದೀಪ್ ಯಾದವ್ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಸ್ನತ್ತ ನಡೆಯುತ್ತಿರುವುದು ಕಂಡುಬಂದಿತು.

ನಂತರ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ನಾಯಕ ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕ ಭಾರತಕ್ಕೆ ಅತ್ಯಂತ ಆರಾಮದಾಯಕ ಗೆಲುವು ತಂದಿತು. ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಗೆಲುವಿನ ರನ್ಗಳೊಂದಿಗೆ ಅರ್ಧಶತಕ ಬಾರಿಸಿದರು.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈವರೆಗೆ ಎಂಟು ಬಾರಿ ಮುಖಾಮುಖಿಯಾಗಿದ್ದು, ಎಂಟನೇ ಬಾರಿಯೂ ಭಾರತ ಮೇಲುಗೈ ಸಾಧಿಸಿದೆ. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಸದ್ಯ ಭಾರತ ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಮತ್ತೊಂದೆಡೆ, ಬಾಂಗ್ಲಾದೇಶ ತಂಡ ತಮ್ಮ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಕಾರಣ, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇದೀಗ ಪುಣೆಯಲ್ಲಿ ಗುರುವಾರದ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಭಾರತವನ್ನು ಎದುರಿಸಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಂಝಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ಉಪನಾಯಕ), ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹ್ಮುದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.