ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ (ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್) ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ 21ನೇ ರೋಚಕ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಸದ್ಯ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವು ಎಲ್ಲರ ಗಮನಸೆಳೆದಿದೆ. ಮೊದಲ ದೊಡ್ಡ ಪಂದ್ಯವಾಗಿ ಹೊರಹೊಮ್ಮಬಹುದು. ಈ ಎರಡು ತಂಡಗಳು ಪಂದ್ಯಾವಳಿಯಲ್ಲಿ ಈವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿವೆ.

ಪಂದ್ಯವು ನೆಕ್-ಟು-ನೆಕ್ ಹೋರಾಟದಿಂದ ಕೂಡಿರಲಿದ್ದು, ನಿಕಟ ಪೈಪೋಟಿಯನ್ನು ಎದುರು ನೋಡಬಹುದು. ಈ ವಿಶ್ವಕಪ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ನ ಅದೃಷ್ಟ ಮತ್ತು ಪ್ರಯಾಣವು ಬಹುತೇಕ ಒಂದೇ ಆಗಿರುತ್ತದೆ. ಈ ಪಂದ್ಯದ ನಂತರ ಅದು ಬದಲಾಗಲಿದೆ.
ಈ ಪಂದ್ಯದಲ್ಲಿ ಎರಡು ತಂಡಗಳು ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿವೆ. ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪಾದದ ಗಾಯ ಅನುಭವಿಸಿದರೆ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದಾರೆ. ಇಬ್ಬರೂ ಭಾನುವಾರದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇದೇ ಸಮಯದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ವಿಶ್ವಕಪ್ನಲ್ಲಿ ಗೆಲುವಿನ ಆವೇಗವನ್ನು ಕಾಯ್ದುಕೊಳ್ಳುವ ಭರವಸೆಯಲ್ಲಿವೆ. ಉತ್ತಮ ನೆಟ್ ರನ್ರೇಟ್ನಿಂದ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಷ್ಟೇ ಸಂಖ್ಯೆಯ ಗೆಲುವುಗಳ ಹೊರತಾಗಿಯೂ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವ ಭರವಸೆ ಇದೆ.
ಈ ವಿಶ್ವಕಪ್ನಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಸೋಲಿಸಿದೆ. ಇನ್ನು ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳನ್ನಯ ಮಣಿಸಿದೆ.
ಹಂಗಾಮಿ ನಾಯಕ ಟಾಮ್ ಲ್ಯಾಥಮ್ ಈವರೆಗೆ ನಾಯಕನಾಗಿ ಅದ್ಭುತವಾದ ಕೆಲಸವನ್ನು ಮಾಡಿರುವುದರಿಂದ, ಕೇನ್ ವಿಲಿಯಮ್ಸನ್ ಅನುಪಸ್ಥಿತಿ ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾಗುವುದಿಲ್ಲ. ಕೇನ್ ವಿಲಿಯಮ್ಸನ್ ಬದಲಿಗೆ ಬ್ಯಾಟರ್ ವಿಲ್ ಯಂಗ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ, ಇದು ಕಿವೀಸ್ ಪಡೆಗೆ ಉತ್ತಮ ಸುದ್ದಿಯಾಗಿದೆ.
ಎಲ್ಲಾ ನಾಲ್ಕು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿರುವ ಭಾರತ ತಂಡ ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದೆ. ಬ್ಯಾಟರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ರನ್ಗಳನ್ನು ಕಲೆಹಾಕುತ್ತಿದ್ದಾರೆ.
ಗಾಯಾಳು ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ ಭಾರತವು ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ರೂಪದಲ್ಲಿ ಸ್ಪೆಷಲಿಸ್ಟ್ ವೇಗಿಯೊಂದಿಗೆ ಆಡಲಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಹವಾಮಾನವು ಈ ಪಂದ್ಯದ ಮೇಲೆ ಪರಿಣಾಮ ಬೀರಬಹುದು. ಅಕ್ಟೋಬರ್ 22ರ ಭಾನುವಾರದಂದು ಧರ್ಮಶಾಲಾದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ. ಅಂದರೆ, ಮಳೆಯು ಆಟದ ಮೇಲೆ ಪ್ರಭಾವ ಬೀರಬಹುದು.
ಅಕ್ಯುವೆದರ್ ಅಪ್ಲಿಕೇಶನ್ ಪ್ರಕಾರ, ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆಯವರೆಗೆ ಮಳೆಯಾಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಆದರೆ ಮಧ್ಯಾಹ್ನ 1 ಗಂಟೆಯ ನಂತರ ಶೇ.51ರಷ್ಟು ಮಳೆಯಾಗುವ ಮುನ್ಸೂಚನೆ ಇದೆ.
ಆದಾಗ್ಯೂ, ಮಳೆಯ ತೀವ್ರತೆಯು ಪ್ರತಿ ಗಂಟೆಗೆ ಕ್ರಮೇಣ ಕಡಿಮೆಯಾಗುತ್ತದೆ. ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಬಗ್ಗೆ ವರದಿಯಾಗಿದೆ.
ಆದ್ದರಿಂದ, ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ ಮಳೆಯಿಂದ ಮೊಟಕುಗೊಂಡರೆ ಆಶ್ಚರ್ಯಪಡಬೇಕಿಲ್ಲ. ಪಂದ್ಯವು ಸಂಪೂರ್ಣವಾಗಿ ಮಳೆಯಿಂದ ರದ್ದಾಗುವ ಸಾಧ್ಯತೆಗಳು ಕಡಿಮೆ.