
ನವದೆಹಲಿ, ಜುಲೈ 15: ಐಸಿಸಿ ವಿಶ್ವಕಪ್ 2019ರಲ್ಲಿ ಯಾವತ್ತು ಟೀಮ್ ಇಂಡಿಯಾ ಹೊರಬಿತ್ತೋ, ಅವತ್ತಿನಿಂದಲೂ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ತಂಡ ಎಡವಿದ್ದೆಲ್ಲಿ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಅಷ್ಟೇ ಅಲ್ಲ, ರನ್ ವಿಚಾರದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲ ಮತ್ತು ಉಪ ನಾಯಕ ರೋಹಿತ್ ಶರ್ಮಾ ಇವರಿಬ್ಬರಲ್ಲಿ ತಂಡ ಯಾರನ್ನು ಹೆಚ್ಚು ಅವಲಂಬಿತವಾಗಿದೆ ಎಂಬುದೂ ಚರ್ಚಿಸಲ್ಪಡುತ್ತಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾನುವಾರ (ಜುಲೈ 15) ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಚಾಂಪಿಯನ್ ತಂಡವಾಗಿ ಹೊರಹೊಮ್ಮುತ್ತಲೇ ಬಿಸಿಸಿಐ ಕಾರ್ಯಕಾರಿ ಸಮಿತಿ, ಈ ಕೂಡಲೇ ಮುಂದಿನ ವಿಶ್ವಕಪ್ಗೆ ತಯಾರಿ ಶುರು ಮಾಡಬೇಕು. ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ನಿಗದಿತ ಓವರ್ಗಳ ಕ್ರಿಕೆಟ್ಗೆ ರೋಹಿತ್ ಅವರನ್ನು ಟೆಸ್ಟ್ಗೆ ಕೊಹ್ಲಿಯನ್ನು ನಾಯಕನಾಗಿ ಆರಿಸುವತ್ತ ಯೋಚಿಸಬೇಕಿದೆ ಎಂದು ತಿಳಿಸಿದೆ.
ಐಎಎನ್ಎಸ್ ಜೊತೆ ಮಾತನಾಡುತ್ತ ಕಾರ್ಯಕಾರಿ ಸಮಿತಿ, '50 ಓವರ್ಗಳ ಮಾದರಿಯ ಕ್ರಿಕೆಟ್ಗೆ ರೋಹಿತ್ ಶರ್ಮಾಗೆ ನಾಯಕತ್ವ ವಹಿಸುವತ್ತ ಯೋಚಿಸಲು ಇದು ಸಕಾಲ. ತಂಡಕ್ಕೆ ನಿರ್ವಹಣಾ ಸಮಿತಿ ಮತ್ತು ಈಗಿನ ನಾಯಕ ಕೊಹ್ಲಿಯ ಅಪಾರ ಬೆಂಬಲ ಲಭಿಸಿದೆ. ಆದರೆ ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಂಡವು ಹೊಸ ತಂತ್ರ, ಯೋಜನೆಗಳತ್ತ ಗಮನ ಹರಿಸಬೇಕಿದೆ' ಎಂದಿದೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಹೊರಬಿದ್ದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಬಿರುಕು ಉಂಟಾಗಿರುವ ಬಗ್ಗೆಯೂ ಗಾಳಿ ಸುದ್ದಿಗಳು ಹಬ್ಬಿದ್ದವು. ಹೀಗಾಗಿ ಕೋಚ್ ರವಿ ಶಾಸ್ತ್ರಿ, ಕೊಹ್ಲಿ, ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಮತ್ತು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಸಮ್ಮುಖದಲ್ಲಿ ವಿಶ್ವಕಪ್ ವಿಮರ್ಶಾ ಸಭೆ ನಡೆಸಲು ಬಿಸಿಸಿಐ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
'ವಿಶ್ವಕಪ್ ಬಗ್ಗೆ ರಿವ್ಯೂ ಮೀಟಿಂಗ್ ಕರೆಯಲಾಗಿತ್ತದೆ ಎಂಬುದನ್ನು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಅವರು ಈಗಾಗಲೇ ನಿಮಗೆ ತಿಳಿಸಿದ್ದಾರೆ. ತಂಡದ ಆಟಗಾರರ ಬಗೆಗಿನ ಗಾಳಿ ಸುದ್ದಿ ಮತ್ತು ತಂಡದಲ್ಲಿರುವ ಇತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಗಮನಹರಿಸಲಿದ್ದೇವೆ' ಎಂದು ಬಿಸಿಸಿಐ ಕಾರ್ಯಕಾರಿ ಸಮಿತಿ ಮಾಹಿತಿ ನೀಡಿದೆ.