
ಮ್ಯಾನ್ಚೆಸ್ಟರ್, ಜೂನ್ 17: ವಿಶ್ವಕಪ್ ಮುಂದಿನ ಕನಿಷ್ಠ 2 ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲ ತಂಡಕ್ಕೆ ಲಭಿಸುತ್ತಿಲ್ಲ. ಭಾನುವಾರ (ಜೂನ್ 16) ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಎಡಕಾಲಿನ ಹ್ಯಾಮ್ಸ್ಟ್ರಿಂಗ್ (ಮಂಡಿರಜ್ಜು) ಗಾಯಕ್ಕೆ ತುತ್ತಾಗಿರುವ ಭುವಿ ಮುಂದಿನ ಪಂದ್ಯಗಳಲ್ಲಿ ತಂಡದಿಂದ ಹೊರಗಿರಲಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಪಾಕ್ ಇನ್ನಿಂಗ್ಸ್ನಲ್ಲಿ ತನ್ನ ಮೂರನೇ (2.4) ಓವರ್ ಎಸೆಯುತ್ತಿದ್ದ ಭುವಿ ಗಾಯಕ್ಕೀಡಾಗಿ ಮೈದಾನದಿಂದ ಹೊರ ನಡೆದಿದ್ದರು.
2.4 ಓವರ್ ಎಸೆದಿದ್ದ ಭುವಿಗೆ ವಿಕೆಟ್ ಲಭಿಸಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಭುವನೇಶ್ವರ್ ಬದಲಿಗೆ ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಂಡದ ಕಪ್ತಾನ ವಿರಾಟ್ ಕೊಹ್ಲಿ ಖಾತರಿಪಡಿಸಿದ್ದಾರೆ.
ಭುವನೇಶ್ವರ್ ಬಗ್ಗೆ ಮಾತನಾಡುತ್ತ ಕೊಹ್ಲಿ, 'ಆಟದ ವೇಳೆ ಜಾರಿ ಭುವಿ ಗಾಯಕ್ಕೀಡಾಗಿದ್ದಾರೆ. ಅವರು ಮುಂದಿನ ಎರಡು ಅಥವಾ ಮೂರು ಪಂದ್ಯಗಳಿಗೆ ತಂಡದಿಂದ ಹೊರಗಿರಲಿದ್ದಾರೆ. ಆದರೆ ಟೂರ್ನಿಯ ಯಾವುದಾದರೊಂದು ಹಂತದಲ್ಲಿ ಭುವಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅವರು ನಮ್ಮ ಪಾಲಿನ ಪ್ರಮುಖ ಆಟಗಾರ' ಎಂದಿದ್ದಾರೆ.
ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಭಾರತ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 89 ರನ್ ಜಯದೊಂದಿಗೆ ವಿಶ್ವಕಪ್ನಲ್ಲಿ ಇಲ್ಲೀವರೆಗೆ ಆಡಿರುವ ಏಳೂ ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆಲುವು ಸಾಧಿಸಿದ ಹೆಗ್ಗಳಿಕೆ ಪಾತ್ರವಾಗಿದೆ. ಭಾರತ ಮುಂದಿನ ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧ ಮೈದಾನಕ್ಕಿಳಿಯಲಿದೆ.