
ನವದೆಹಲಿ, ಮೇ 21: ಇನ್ನು 10 ದಿನಗಳೊಳಗೆ (ಮೇ 30) ಆರಂಭಗೊಳ್ಳುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾದ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ ಎಂಬ ಚರ್ಚೆ ಈಗಲೂ ನಡೆಯುತ್ತಲೇ ಇದೆ. ಆದರೆ ಈ ನಡುವೆ ಆಲ್ ರೌಂಡರ್ ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕಕ್ಕೆ ಸಂಪೂರ್ಣ ಸಜ್ಜಾದಂತಿದೆ.
ಭಾರತ ವಿಶ್ವಕಪ್ ತಂಡದಲ್ಲಿ ಬಹು ಪ್ರಮುಖವಾದ ನಾಲ್ಕನೇ ಕ್ರಮಾಂಕಕ್ಕೆ ಎಂಎಸ್ ಧೋನಿ, ಕೆಎಲ್ ರಾಹುಲ್, ವಿಜಯ್ ಶಂಕರ್ ಹೆಸರುಗಳಲ್ಲಿ ಒಂದನ್ನು ಕ್ರಿಕೆಟ್ ವಲಯ ಚರ್ಚಿಸುತ್ತಲೇಯಿದೆ. ಬಿಸಿಸಿಐಯು 4ನೇ ಕ್ರಮಾಂಕ ಖಾತರಿಪಡಿಸುವುದಕ್ಕೂ ಮುನ್ನವೇ ವಿಜಯ್ ಶಂಕರ್, ತಾನು ದಾಳಿಯಾತ್ಮಕ ಬ್ಯಾಟ್ಸ್ಮನ್; ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಲು ತಯಾರಿದ್ದೇನೆ ಎಂದು ಹೇಳಿದ್ದಾರೆ.
'ಪಂದ್ಯದಲ್ಲಿ ನಿರ್ಣಾಯಕವಾಗಿರುವ 4ನೇ ಕ್ರಮಾಂಕಕ್ಕೆ ನಾನು ಸಂಪೂರ್ಣ ತಯಾರಾಗಿದ್ದೇನೆ. ಮಾನಸಿಕವಾಗಿಯೂ ನಾನು ಈ ಸ್ಥಾನದಲ್ಲಿ ಬ್ಯಾಟ್ ಮಾಡಲು ಸಜ್ಜಾಗಿದ್ದೇನೆ. ಆದರೆ ನನ್ನನ್ನು ನಾನು ಹಾರ್ದಿಕ್ ಪಾಂಡ್ಯಗೆ ಹೋಲಿಸಿಕೊಳ್ಳಲಾರೆ' ಎಂದು ಟೈಮ್ಸ್ ಆಫ್ ಇಂಡಿಯಾದ ಜೊತೆ ಮಂಗಳವಾರ (ಮೇ 21) ಮಾತನಾಡುತ್ತ ವಿಜಯ್ ಹೇಳಿಕೊಂಡಿದ್ದಾರೆ.
'ನಾನೊಬ್ಬ ದಾಳಿಯಾತ್ಮಕ ಶೈಲಿಯ ಬ್ಯಾಟ್ಸ್ಮನ್. ಹೀಗಾಗಿ ಬಹುಶಃ 7-8ನೇ ಓವರ್ ಬಳಿಕ ಬ್ಯಾಟಿಂಗ್ಗೆ ಇಳಿಯುವಂತಾಗಲಿ ಇಲ್ಲ 30-35 ಓವರ್ ಬಳಿಕ ಬ್ಯಾಟ್ ಬೀಸುವಂತಾಗಲಿ ನಾನು ಯಾವುದೇ ಸಂದರ್ಭಕ್ಕೂ ತಯಾರಿದ್ದೇನೆ' ಎಂದು ಆಯ್ಕೆ ಸಮಿತಿಯಿಂದ ತ್ರೀ ಡೈಮೆನ್ಶನಲ್ (ಮೂರು ಆಯಾಮಗಳ) ಆಟಗಾರ ಎಂದು ಕರೆಯಲ್ಪಟ್ಟಿರುವ ಶಂಕರ್ ತಿಳಿಸಿದ್ದಾರೆ.