
ಲಂಡನ್, ಜೂನ್ 12: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್ ಗಾಯಗೊಂಡು ಕೊಹ್ಲಿ ಬಳಗ ಚಿಂತೆಗೀಡಾಗುವಂತೆ ಮಾಡಿದ್ದಾರೆ. ಧವನ್ ಸ್ಥಾನಕ್ಕೆ ಯಾವ ಆಟಗಾರ ಸೂಕ್ತ ಎಂಬ ಚರ್ಚೆಯೀಗಲೂ ಕ್ರಿಕೆಟ್ ವಯಲದಲ್ಲಿ ಕೇಳಿ ಬರುತ್ತಲೇಯಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಜಿಂಕ್ಯ ರಹಾನೆಯನ್ನು ಹೆಸರಿಸಿ ಅಚ್ಚರಿ ಮೂಡಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್, ಮುಂದೆ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುತ್ತಿಲ್ಲ. ಈ ಎರಡೂ ಪಂದ್ಯಗಳ ಬಳಿಕ ಧವನ್ ಆರೋಗ್ಯದಲ್ಲಿ ಚೇತರಿಕೆ ಕಂಡರೆ ತಂಡದಲ್ಲಿ ಸೇರಿಕೊಳ್ಳಲು ಬಿಸಿಸಿಐ ಬಯಸಿದೆ. ಆದರೆ ಧವನ್ ಸ್ಥಾನಕ್ಕೆ ಅಜಿಂಕ್ಯ ರಹಾನೆ ಸೂಕ್ತ ಎಂದಿರುವ ಕಪಿಲ್ ದೇವ್ ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
'ಒಂದು ವೇಳೆ ಧವನ್ ಜಾಗಕ್ಕೆ ರಹಾನೆಯವರನ್ನು ಪರಿಗಣಿಸೋದಾದ್ರೆ ಅವರೇ ನನ್ನ ಮೊದಲ ಆಯ್ಕೆ. ಅಂಬಾಟಿ ರಾಯುಡು ಮತ್ತು ರಿಷಬ್ ಪಂತ್ ಬದಲಿಗೆ ರಹಾನೆಯನ್ನು ಆರಿಸಲು ನಾನು ಬಯಸುತ್ತೇನೆ. ವಿಶ್ವಕಪ್ನಂತ ದೊಡ್ಡ ಟೂರ್ನಿಗಳಲ್ಲಿ ಆಡಲು ರಹಾನೆ ಸಾಕಷ್ಟು ಅನುಭವವುಳ್ಳ ಆಟಗಾರ' ಎಂದು ಭಾರತ ಮೊದಲ ವಿಶ್ವಕಪ್ ಗೆದ್ದಾಗಿನ ತಂಡದ ನಾಯಕ ಕಪಿಲ್ ಹೇಳಿದ್ದಾರೆ.
'ರಹಾನೆ ಅವರು ಆರಂಭಿಕರಾಗಿಯೂ ಬ್ಯಾಟಿಂಗ್ ಮಾಡಬಲ್ಲರು. ಮಧ್ಯಮ ಕ್ರಮಾಂಕಕ್ಕೂ ರಹಾನೆ ಸೂಕ್ತ ಆಟಗಾರ' ಎಂದು ಕಪಿಲ್ ದೇವ್ ಅಭಿಪ್ರಾಯಿಸಿದ್ದಾರೆ. ಧವನ್ ಬದಲಿಗೆ ಸ್ಟ್ಯಾಂಡ್ಬೈ ಆಟಗಾರನಾಗಿ ಪಂತ್ ಅವರನ್ನು ಬಿಸಿಸಿಐ ಕರೆಸಿಕೊಳ್ಳುವುದಕ್ಕೂ ಮೊದಲೇ ದೇವ್ ತನ್ನ ಅಭಿಪ್ರಾಯ ತಿಳಿಸಿದ್ದರು. ಆದರೆ ಕಪಿಲ್ ಆಯ್ಕೆಗೆ ಮಾನ್ಯತೆ ಲಭಿಸಿದಂತಿಲ್ಲ.