
ಲಂಡನ್, ಜುಲೈ 5: ವಿಶ್ವಕಪ್ 2019ರ ಶ್ರೀಲಂಕಾ-ಭಾರತ ಪಂದ್ಯಕ್ಕೂ ಮುನ್ನ ಮಾತನಾಡಿರುವ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ, ಟೀಮ್ ಇಂಡಿಯಾ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಎಂಎಸ್ ಧೋನಿ ಬಗ್ಗೆ ನೇರ ಅಭಿಪ್ರಾಯ ತಿಳಿಸಿದ್ದಾರೆ. ಗುರುವಾರ (ಜುಲೈ 4) ಮಾಲಿಂಗ, ಧೋನಿ ಕುರಿತು ಹೇಳಿಕೆ ನೀಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವಿಶ್ವಕಪ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಭಾರತ ತಂಡದ ಮಾಜಿ ನಾಯಕ ಧೋನಿ ಪರದಾಡುತ್ತಿದ್ದಾರೆ. ತನಗಿರುವ ಸಾಮರ್ಥ್ಯಕ್ಕೆ, ಹೆಸರಿಗೆ ತಕ್ಕಂತ ಆಟವನ್ನು ಯಾಕೋ ಇತ್ತೀಚೆಗೆ ದೋನಿ ಪ್ರದರ್ಶಿಸುತ್ತಲೇ ಇಲ್ಲ. ಇದಕ್ಕಾಗಿ ಧೋನಿ ಬಗ್ಗೆ ಕ್ರಿಕೆಟ್ ವಲಯದಲ್ಲಿ ಅಸಮಾಧಾನವೂ ವ್ಯಕ್ತವಾಗುತ್ತಿದೆ.
ಆದರೆ ಅನುಭವಿ ಬೌಲರ್ ಮಾಲಿಂಗ, ಎಂಎಸ್ ಧೋನಿ ಬೆನ್ನಿಗೆ ನಿಂತಿದ್ದಾರೆ. ಕೂಲ್ ಕ್ಯಾಪ್ಟನ್ ಇನ್ನೊಂದು ಅಥವಾ ಎರಡು ವರ್ಷ ಕ್ರಿಕೆಟ್ ವಲಯದಲ್ಲಿರಬೇಕು, ಆಡಬೇಕು. ಆ ಮೂಲಕ ಮುಂಬರಲಿರುವ ಯುವ ಆಟಗಾರರಿಗೆ ತನ್ನ ವೃತ್ತಿ ಬದುಕಿನ ಅನುಭವಗಳನ್ನು ಧಾರೆಯೆರೆಯಬೇಕು ಎಂದಿದ್ದಾರೆ.
'ನನ್ನ ಪ್ರಕಾರ ಎಂಎಸ್ (ಧೋನಿ) ಇನ್ನೂ ಒಂದು ಅಥವಾ ಎರಡು ವರ್ಷ ಆಡಬೇಕು. ಅವರು ಕಳೆದ 10 ವರ್ಷಗಳಿಂದಲೂ ಬೆಸ್ಟ್ ಫಿನಿಷರ್ ಎಂದು ಹೆಸರುವಾಸಿಯಾದವರು. ಮುಂದೆಯೂ ಈ ವಿಚಾರದಲ್ಲಿ ಅವರನ್ನು ಯಾರೂ ಹಿಂದಿಕ್ಕಲಾರರು ಎಂದು ನನಗನ್ನಿಸುತ್ತಿದೆ. ಪಂದ್ಯದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಮುಂಬರುವ ಯುವಕರಿಗೆ ಮಾಹಿ ಮಾರ್ಗದರ್ಶನ ನೀಡಬೇಕು' ಎಂದು ಲಸಿತ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಅಂತಿಮ ಐದು ಓವರ್ಗಳಲ್ಲಿ ಪ್ರತೀ ಓವರ್ಗೆ 12 ರನ್ಗಳ ಅಗತ್ಯವಿತ್ತು. ಆಗ ಕ್ರೀಸ್ನಲ್ಲಿ ಆಲ್ ರೌಂಡರ್ ಕೇದಾರ್ ಜಾಧವ್ ಮತ್ತು ಧೋನಿ ಇದ್ದರು. ತಂಡದ ಗೆಲುವಿಗೆ ದೊಡ್ಡ ರನ್ ಅಗತ್ಯವಿದ್ದ ಆ ಹೊತ್ತಿನಲ್ಲೂ ಧೋನಿ-ಜಾಧವ್ ಪ್ರತೀ ಎಸೆತಕ್ಕೆ ಸಿಂಗಲ್ ರನ್ ಗಳಿಸಿ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಆ ಪಂದ್ಯದಲ್ಲಿ ಭಾರತ 31 ರನ್ಗಳಿಂದ ಸೋತಿತಲ್ಲದೆ, ಐಸಿಸಿ ವಿಶ್ವಕಪ್ನಲ್ಲಿ ಮೊದಲ ಸೋಲಿನ ಆಘಾತ ಅನುಭವಿಸಿತ್ತು. ಅದಾಗಿ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಜಾಧವ್ ಬದಲು ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಅಂದು 4ನೇ ಸ್ಥಾನದಲ್ಲಿ ಆಡಿದ್ದ ಪಂತ್ ಈಗ ತಂಡದಲ್ಲಿ ಗಟ್ಟಿಯಾಗಿದ್ದಾರೆ.