
ಲಂಡನ್, ಜೂನ್ 29: ಐಸಿಸಿ ವಿಶ್ವಕಪ್ 2019ರಲ್ಲಿ ಭಾರತದ ಇನ್ನುಳಿದ ಪಂದ್ಯಗಳಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರು 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ. 4ನೇ ಕ್ರಮಾಂಕ ನಿರ್ಣಾಯಕವಾಗಿರುವುದರಿಂದ ಧೋನಿ ಅದಕ್ಕೆ ಸೂಕ್ತ ಎಂದು ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವೆಸ್ಟ್ ಇಂಡೀಸ್ ವಿರುದ್ಧ ಮತ್ತು ಅಫ್ಘಾನಿಸ್ತಾನ ವಿರುದ್ಧ ನಿಧಾನ ಗತಿಯ ಬ್ಯಾಟಿಂಗ್ ಮಾಡಿದ್ದಾರೆ ಎಂದು ಧೋನಿಯವರನ್ನು ಕ್ರಿಕೆಟ್ ವಲಯ ಟೀಕಿಸುತ್ತಿದೆ. ಅಸಲಿಗೆ ಧೋನಿ ಅಫ್ಘಾನ್ ವಿರುದ್ಧ ಕೊಂಚ ನಿಧಾನಗತಿಯ ಬ್ಯಾಟಿಂಗ್ (28 ರನ್/52) ತೋರಿಸಿದ್ದಾರಾದರೂ ವಿಂಡೀಸ್ ಎದುರು 61 ಎಸೆತಗಳಿಗೆ ಅಜೇಯ 56 ರನ್ ಪೇರಿಸಿದ್ದರು.
'ಎತ್ತರದಲ್ಲಿರುವ ತಂಡವೊಂದರ ಬಗ್ಗೆ ನಾನು ಸಾಮಾನ್ಯವಾಗಿ ಮಾತನಾಡಲು ಹೋಗುವುದಿಲ್ಲ. ಭಾರತ ಈಗ ಪ್ರಬಲ ತಂಡಗಳ ಸಾಲಿನಲ್ಲಿದೆ. ಆದರೆ ನನಗೆ ಭಾರತದ 4ನೇ ಕ್ರಮಾಂಕದ ಬಗ್ಗೆ ಕಳಕಳಿಯಿದೆ. ಈ ಬ್ಯಾಟಿಂಗ್ ಕ್ರಮಾಂಕಕ್ಕೆ ಎಂಎಸ್ ಬಂದರೆ ಖುಷಿ' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಜೋನ್ಸ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಡೀನ್, ರವೀಂದ್ರ ಜಡೇಜಾ ತಂಡ ಸೇರಿಕೊಂಡರೆ ಅನುಕೂಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಧೋನಿ ನಂತರ ರವೀಂದ್ರ ಜಡೇಜಾ ಬ್ಯಾಟ್ ಎತ್ತಿಕೊಂಡರೆ ಸ್ಪಿನ್ ಎಸೆತಗಳ ಅನುಕೂಲವನ್ನು ಭಾರತ ಪಡೆದುಕೊಳ್ಳಬಹುದು' ಜೋನ್ ತಿಳಿಸಿದರು.
ಇನ್ನೊಂದು ಬದಿ ಭಾರತದ ಮಾಜಿ ವೇಗಿ ಇರ್ಫಾನ್ ಪಠಾನ್ ಅವರು ನಾಲ್ಕನೇ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಸೂಕ್ತ ಎಂದಿದ್ದಾರೆ. ಸದ್ಯ ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಲ್ ರೌಂಡರ್ ವಿಜಯ್ ಶಂಕರ್ ಆಡುತ್ತಿದ್ದಾರೆ. ಆದರೆ ಶಂಕರ್ ಗಮನಾರ್ಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಈ ಜಾಗಕ್ಕೆ ರಿಷಭ್ ಪಂತ್, ಧೋನಿ ಅಥವಾ ದಿನೇಶ್ ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ.