

ನವದೆಹಲಿ, ಅಕ್ಟೋಬರ್ 11: ಇದು ಗಲ್ಲಿ ಕ್ರಿಕೆಟ್ ಅಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಶ್ವ ಟಿ20 ಅರ್ಹತೆ ಪಡೆಯುವ ದೇಶಗಳಿಗಾಗಿ ಆಡಿಸಿದ ಟೂರ್ನಿ. ಆದರೆ, ಆಟದ ಫಲಿತಾಂಶ ನೋಡಿದಾಗ ಇದಕ್ಕಿಂತ ನಮ್ಮ ಗಲ್ಲಿ ಕ್ರಿಕೆಟ್ ತಂಡಗಳೇ ವಾಸಿ ಎಂದೆನಿಸುತ್ತದೆ.
ನಿಜ. ಮಲೇಷ್ಯಾ ಮತ್ತು ಮ್ಯಾನ್ಮಾರ್ ನಡುವೆ ಮಂಗಳವಾರ ನಡೆದ ಟಿ20 ಪಂದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ದಾಖಲೆ ಸೃಷ್ಟಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮ್ಯಾನ್ಮಾರ್ ಹತ್ತು ಓವರ್ ಆಡಿದರೆ, ಚೇಸಿಂಗ್ ಮಾಡಿದ ಮಲೇಷ್ಯಾ ಕೇವಲ ಹತ್ತೇ ಎಸೆತದಲ್ಲಿ 8 ವಿಕೆಟ್ಗಳಿಂದ ಗೆಲುವಿನ ಗುರಿ ಮುಟ್ಟಿತು. ಇದು ಹೇಗೆ ಸಾಧ್ಯ? ಈ ಪಂದ್ಯ ನಡೆದ ಬಗೆ ಮಜವಾಗಿದೆ.
ಐಸಿಸಿ ವಿಶ್ವ ಟಿ20 ಏಷ್ಯಾ ಪ್ರಾದೇಶಿಕ ಅರ್ಹತಾ ಟೂರ್ನಿಯ ಪಂದ್ಯ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿತ್ತು. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಮ್ಯಾನ್ಮಾರ್, ರನ್ ಗಳಿಸಲು ಸಾಧ್ಯವಾಗದೆ ಪರದಾಡಿತು. 10.1 ಓವರ್ ಬ್ಯಾಟಿಂಗ್ ಮಾಡಿದ್ದರೂ ಗಳಿಸಿದ್ದು ಕೇವಲ 9 ರನ್. ಅದರಲ್ಲಿ ಆರು ಮಂದಿ ಬ್ಯಾಟ್ಸ್ಮನ್ಗಳದ್ದು ಶೂನ್ಯ ರನ್ ಸಾಧನೆ.
ಮಲೇಷ್ಯಾದ ಸ್ಪಿನ್ನರ್ ಪವನ್ದೀಪ್ ಸಿಂಗ್ ನಾಲ್ಕು ಓವರ್ಗಳಲ್ಲಿ ಕೇವಲ ಒಂದು ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಮ್ಯಾನ್ಮಾರ್ ತಂಡ ಗಳಿಸಿದ 9 ಸ್ಕೋರ್ನಲ್ಲಿ ಎಲ್ಲವೂ ಒಂಟಿ ರನ್ಗಳಾಗಿದ್ದವು. ಈ ವೇಳೆ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಹತ್ತು ಓವರ್ಗಳ ಆಟ ಮುಗಿದ್ದರಿಂದ ಮಲೇಷ್ಯಾ ತಂಡಕ್ಕೆ ಇರುವ ಆ ಪುಟ್ಟ ಗುರಿಯನ್ನೇ ಕಡಿತಗೊಳಿಸಲಾಗಿತು.
ಎಂಟು ಓವರ್ಗಳಲ್ಲಿ ಗೆಲ್ಲಲು ಮಲೇಷ್ಯಾ 6 ರನ್ ಗಳಿಸಬೇಕಿತ್ತು. ಮೊದಲ ಓವರ್ನಲ್ಲೇ ಆರಂಭಿಕರಿಬ್ಬರೂ ಶೂನ್ಯಕ್ಕೆ ಓಟಾದರು. ಕೊನೆಗೆ ಒಂದೊಂದೇ ರನ್ ರನ್ ಸೇರಿಸಿದ ನಾಲ್ಕನೇ ವಿಕೆಟ್ ಜೋಡಿ ಸ್ಕೋರ್ ಸಮ ಮಾಡಿಕೊಂಡಿತು. ಬಳಿ ಬ್ಯಾಟ್ಸ್ಮನ್ ಸುಹಾನ್ ಅಳಗರತ್ನಂ ಇಡೀ ಪಂದ್ಯದ ಏಕೈಕ ಬೌಂಡರಿ ರೂಪದಲ್ಲಿ ಸಿಕ್ಸರ್ ಸಿಡಿಸಿದರು. 1.4 ಓವರ್ಗಳಲ್ಲಿಯೇ ಇನ್ನಿಂಗ್ಸ್ ಮುಗಿಯಿತು.