
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಈಗ ಸಾಕಷ್ಟು ಕುತೂಹಲ ಹಂತಕ್ಕೆ ಬಂದು ತಲುಪಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದ್ದು ಮೂರನೇ ಪಂದ್ಯ ಡ್ರಾ ಫಲಿತಾಂಶ ಪಡೆದುಕೊಂಡಿದೆ. ಹೀಗಾಗಿ ಬ್ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ. ಹೀಗಾಗಿ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ಶುಕ್ರವಾರದಿಂದ ಆರಂಭವಾಗಲಿರುವ ಅಂತಿಮ ಪಂದ್ಯದತ್ತ ನೆಟ್ಟಿದೆ.
ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಭಾರತ 131ಓವರ್ಗಳನ್ನು ಆಡಿ ಪಂದ್ಯವನ್ನು ಉಳಿಸಿಕೊಂಡ ಬಳಿಕ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ. ಪ್ರವಾಸಿ ಭಾರತೀಯ ಕ್ರಿಕೆಟ್ ತಂಡ ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡರೆ ಅದು ಅವರ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸರಣಿ ಗೆಲುವು ಆಗಿರಲಿದೆ ಮತ್ತು ಬಹುಶಃ ಟೆಸ್ಟ್ ಇತಿಹಾಸದಲ್ಲಿ ಅತ್ಯುತ್ತಮ ಸರಣಿ ಗೆಲುವು ಇದಾಗಿರಲಿದೆ ಎಂದಿದ್ದಾರೆ ಶೋಯೆಬ್ ಅಖ್ತರ್.
"ಈಗ ಟೆಸ್ಟ್ ಸರಣಿಯ ಅಂತಿಮ ಹಂತದಲ್ಲಿದ್ದೇವೆ. ಭಾರತ ಸರಣಿಯನ್ನು ಗೆಲ್ಲುವ ಬಯಕೆಯಲ್ಲಿದೆ. ತುಂಬಾ ಗಾಯದ ಸಮಸ್ಯೆ ಕಾಡುತ್ತಿರುವುದರಿಂದಾಗಿ ಸವಾಲೆನಿಸಲಿದೆ. ಆದರೆ ಭಾರತೀಯ ತಂಡದ ಬೆಂಚ್ ಸ್ಟ್ರೆಂತ್ ಅವರಿಂದ ಇದು ಸಾಧ್ಯವಾಗಿಸಲಿದೆ ಎಂಬ ನಂಬಿಕೆ ಹುಟ್ಟಿಸುತ್ತದೆ. ಅವರು ತಮ್ಮ ಅಂತಿಮ ಪ್ರಯತ್ನವನ್ನು ಮಾಡಿದರೆ ಸರಣಿಯನ್ನು ಗೆಲ್ಲಲು ಸಾಧ್ಯವಿದೆ" ಎಂದಿದ್ದಾರೆ ಅಖ್ತರ್.
"ಈ ಹಂತದಿಂದ ನೋಡಿದರೆ ಈ ಸರಣಿಯನ್ನು ಭಾರತ ಗೆದ್ದುಕೊಂಡರೆ ಅದು ಅತ್ಯಂತ ದೊಡ್ಡ ಗೆಲುವು ಆಗಿರಲಿದೆ. ನನ್ನ ಪ್ರಕಾರ ಅದು ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಗೆಲುವಾಗಿರಲಿದೆ " ಎಂದು ಪಾಕಿಸ್ತಾನ ಕ್ರಿಕೆಟ್ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.
"ಈ ಎಲ್ಲದರ ಶ್ರೇಯಸ್ಸು ಕೂಡ ಇಡೀ ಭಾರತೀಯ ತಂಡಕ್ಕೆ ಸಿಗಬೇಕು. ಯಾಕೆಂದರೆ ಅವರು ಸಾಕಷ್ಟು ಧೈರ್ಯವನ್ನು ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ. ಇಡೀ ತಂಡ, ಸ್ಪಿನ್ನರ್ಗಳು, ವೇಗಿಗಳು, ಬೂಮ್ರಾ ತನ್ನ ಎಲ್ಲಾ ಶಕ್ತಿಯನ್ನು ನೀಡಿದ್ದು ಈಗ ಅವರು ಗಾಯಗೊಂಡಿದ್ದಾರೆ. ಆದರೆ ಸರಣಿಯನ್ನು ಮಾತ್ರ ಬಿಟ್ಟುಕೊಡಲಿಲ್ಲ ಎಂದು ಶೋಯೆಬ್ ಅಖ್ತರ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.