ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟದ್ದು ನೀತಿಗೆಟ್ಟ ಕೆಲಸ ಎಂದು ಕಿಡಿಕಾರಿದ ಮಾಲೀಕರು!

ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಲಖನೌ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದರಿಂದ 10 ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಈ ಕಾರಣದಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ತೀರ್ಮಾನ ಕೈಗೊಂಡಿತ್ತು. ಹೀಗಾಗಿ ಆಟಗಾರರನ್ನು ಮೆಗಾ ಹರಾಜಿಗೆ ಬಿಡುವ ಮುನ್ನ ಪ್ರಸ್ತುತ ಅಸ್ತಿತ್ವದಲ್ಲಿರುವ 8 ಐಪಿಎಲ್ ತಂಡಗಳಿಗೆ ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶವನ್ನು ಬಿಸಿಸಿಐ ನೀಡಿತ್ತು.
ಹೀಗೆ ವಿವಿಧ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂಬ ವಿವರವನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ಬಿಸಿಸಿಐ ಗಡುವು ನೀಡಿತ್ತು. ಅದರಂತೆಯೇ ಎಲ್ಲಾ ತಂಡಗಳು ಕೂಡ ಸಮಯದೊಳಗೆ ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ವಿವರವನ್ನು ಬಿಸಿಸಿಐಗೆ ಸಲ್ಲಿಸಿದ್ದವು. ಹೀಗೆ ನವೆಂಬರ್ 30ರ ಸಂಜೆ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬ ವಿಷಯ ಬಹಿರಂಗವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 16 ಕೋಟಿ ಪಡೆಯುವುದರ ಮೂಲಕ ಈ ಬಾರಿಯ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಟಗಾರರು ಎನಿಸಿಕೊಂಡರು. ಹಾಗೂ ಎಲ್ಲಾ ಫ್ರಾಂಚೈಸಿಗಳು ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಯತ್ನವನ್ನು ಮಾಡಿ ಯಶಸ್ವಿಯಾದವರು. ಆದರೆ ಪಂಜಾಬ್ ಕಿಂಗ್ಸ್ ತಂಡ ಮಾತ್ರ ಈ ವಿಷಯದಲ್ಲಿ ಎಡವಿತು. ಹೌದು, ರಿಟೆನ್ಷನ್ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹಬ್ಬಿತ್ತು. ಆ ಸುದ್ದಿ ಇದೀಗ ನಿಜವಾಗಿದ್ದು ಪಂಜಾಬ್ ಕಿಂಗ್ಸ್ ಕೆಎಲ್ ರಾಹುಲ್ ಅವರನ್ನು ರೀಟೈನ್ ಮಾಡಿಕೊಂಡಿಲ್ಲ. ಹೀಗೆ ರಿಟೆನ್ಷನ್ ಪ್ರಕ್ರಿಯೆ ಮುಗಿದ ನಂತರ ಮಾತನಾಡಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ ಕೆಎಲ್ ರಾಹುಲ್ ಕುರಿತು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ನಾವು ಕೆಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ಯತ್ನಿಸಿದೆವು
"ರಿಟೆನ್ಷನ್ ಪ್ರಕ್ರಿಯೆಯಲ್ಲಿ ನಾವು ಕೆಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡಿದೆವು. ಆದರೆ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಭಾಗವಹಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ತಂಡದಿಂದ ಹೊರಗುಳಿದರು. ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ಕೆಎಲ್ ರಾಹುಲ್ ಬೇರೆ ಯಾವುದೇ ಫ್ರಾಂಚೈಸಿ ಜೊತೆ ಖರೀದಿ ಕುರಿತಾಗಿ ಸಂಪರ್ಕ ಬೆಳೆಸಿದರೆ ಅದೊಂದು ನೀತಿಗೆಟ್ಟ ಕೆಲಸವಾಗಲಿದೆ" ಎಂದು ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಮಯಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ವಾಡಿಯಾ
ಇನ್ನೂ ಮುಂದುವರಿದು ಪಂಜಾಬ್ ಕಿಂಗ್ಸ್ ರಿಟೇನ್ ಮಾಡಿಕೊಂಡಿರುವ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಕುರಿತು ವಿಶೇಷವಾಗಿ ಮಾತನಾಡಿದ ನೆಸ್ ವಾಡಿಯಾ "ಪಂಜಾಬ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿರುವುದು ತುಂಬಾ ಸಂತಸದ ವಿಷಯ. ಮಯಾಂಕ್ ಅಗರ್ವಾಲ್ ತಂಡದ ಓರ್ವ ಅತ್ಯದ್ಭುತ ಆಟಗಾರ ಮತ್ತು ಅರ್ಷ್ ದೀಪ್ ಸಿಂಗ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ರೀಟೈನ್ ಮಾಡಿಕೊಂಡ ಆಟಗಾರರು
ಆಟಗಾರ 1: ಮಯಾಂಕ್ ಅಗರ್ವಾಲ್ - ರೂ. 12 ಕೋಟಿ (14 ಕೋಟಿ ಪರ್ಸ್ನಿಂದ ಕಡಿತಗೊಳಿಸಲಾಗಿದೆ)
ಆಟಗಾರ 2: ಅರ್ಷದೀಪ್ ಸಿಂಗ್ - ರೂ. 4 ಕೋಟಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications