ಏಷ್ಯಾಕಪ್ ಟೂರ್ನಿ ಕೊನೆಯ ಹಂತವನ್ನು ತಲುಪಿದ್ದು ವಿಶ್ವಕಪ್ಗೆ ದಿನಗಳು ಮತ್ತಷ್ಟು ಹತ್ತಿರವಾಗುತ್ತಿದೆ. ಈಗಾಗಲೇ ಈ ವಿಶ್ವಕಪ್ಗೆ ಟೀಮ್ ಇಂಡಿಯಾ ಸೇರಿದಂತೆ ಬಹುತೇಕ ತಂಡಗಳ 15ರ ಬಳಗ ಪ್ರಕಟವಾಗಿದೆ. ಭಾರತದ ಈ ತಂಡದಲ್ಲಿ ಆಯ್ಕೆ ಮಂಡಳಿ ಕೆಲ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಅನುಭವಿ ಆರ್ ಅಶ್ವಿನ್ ಅವರನ್ನು ಈ ವಿಶ್ವಕಪ್ನಿಂದ ಹೊರಗಿಟ್ಟು ತಂಡವನ್ನು ಪ್ರಕಟಿಸಿರುವುದು ಹೆಚ್ಚಿನ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಟೀಮ್ ಇಂಡಿಯಾದ ಆಯ್ಕೆ ಮಂಡಳಿ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಮೂವರು ಎಡಗೈ ಸ್ಪಿನ್ನರ್ಗಳಿಗೆ ಮಣೆಹಾಕಿದೆ. ಹೀಗಾಗಿ ಆರ್ ಅಶ್ವಿನ್ ಅವರನ್ನು ವಿಶ್ವಕಪ್ನ ಪ್ರಾಥಮಿಕ ತಂಡಕ್ಕೆ ಪರಿಗಣಿಸಲಾಗಿಲ್ಲ. ಇಂಥಾ ಸಮದರ್ಭದಲ್ಲಿ ಅನುಭವಿ ಆಟಗಾರ ಆರ್ ಅಶ್ವಿನ್ ತಮ್ಮ ಯೂಟ್ಯೂ್ ಚಾನೆಲ್ನಲ್ಲಿ ತಮ್ಮ ವೃತ್ತಿ ಬದುಕಿನ ಏರಿಳಿತಗಳ ಬಗ್ಗೆ ಮಾತನಾಡುತ್ತಾ ಕ್ರಿಕೆಟ್ನ ಮೇಲೆ ತನ್ನ ಬದ್ಧತೆಯನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರ್ ಅಶ್ವಿನ್ ತಂಡಕ್ಕೆ ಯಾವಾಗ ನನ್ನ ಅಗತ್ಯವಿದೆಯೋ ಆಗ ತನ್ನಿಂದಾಗುವ ಎಲ್ಲವನ್ನೂ ನಿಡಲು ತಾನು ಸಿದ್ಧನಿದ್ದೇನೆ ಎನ್ನುವ ಮಾತು ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆರ್ ಅಶ್ವಿನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರೊಂದಿಗಿನ ಮಾತುಕತೆಯನ್ನು ಹಂಚಿಕೊಂಡಿದ್ದಾರೆ. "ನಾನು ಕಳೆದ 14-15 ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿದ್ದೇನೆ. ನಾನು ಸಾಕಷ್ಟು ಶ್ರೇಷ್ಠ ಕ್ಷಣಗಳನ್ನು ಹೊಂದಿದ್ದೇನೆ. ಈ ಅವಧಿಯಲ್ಲಿ ನನ್ನ ವೈಫಲ್ಯಗಳು ಕೂಡ ಆಗಿದೆ. ಒಂದು ದಿನ ನಾನು ಅಭಿನವ್ ಬಿಂದ್ರಾ ಜೊತೆಗೆ ಮಾತನಾಡುತ್ತಿದ್ದೆ. ಅವರು ನನ್ನ ಬಳಿ 'ನಾನು ಯಶಸ್ಸು ಸಾಧಿಸಿದ್ದಕ್ಕಿಂತ ಹೆಚ್ಚು ವೈಫಲ್ಯ ಕಂಡಿದ್ದೇನೆ' ಎಂದಿದ್ದರು" ಎಂದು ಆರ್ ಅಶ್ವಿನ್ ಹೇಳಿಕೆಯನ್ನು ನೀಡಿದ್ದಾರೆ.
"ನನ್ನಲ್ಲಿ ಕೂಡ ಯಶಸ್ಸು ಹಾಗೂ ವೈಫಲ್ಯಗಳು ಸಮಾನವಾಗಿಯೇ ಇದೆ. ಆದರೆ ನಾನು ಭಾರತ ಕ್ರಿಕೆಟನ್ನು ನನ್ನ ಹೃದಯಕ್ಕೆ ಸಮೀಪದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದೇನೆ. ನಾಳೆಯೇ ಅವರಿಗೆ ನನ್ನ ಅಗತ್ಯವಿದೆ ಎನಿಸಿದರೆ ನಾನು ಸಿದ್ದನಿದ್ದೇನೆ ಹಾಗೂ ನನ್ನ 100 ಶೇಕಡಾ ಪ್ರಯತ್ನವನ್ನು ನೀಡಲಿದ್ದೇನೆ" ಎಂದು ಆರ್ ಅಶ್ವಿನ್ ಹೇಳಿಕೆ ನೀಡಿದ್ದಾರೆ.
ಆರ್ ಅಶ್ವಿನ್ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಪ್ರಮುಖ ಭಾಗವಾಗಿದ್ದಾರೆ. ಆದರೆ ವೈಟ್ಬಾಲ್ ಮಾದರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತಂಡದಲ್ಲಿ ಸ್ಥಿರ ಸ್ಥಾನವನ್ನು ಪಡೆಯಲು ಅಶ್ವಿನ್ ವಿಫಲವಾಗಿತ್ತಲೇ ಇದ್ದಾರೆ. ಆದರೆ ಭಾರತದಲ್ಲಿಯೇ ವಿಶ್ವಕಪ್ ನಡೆಯಲಿರುವ ಕಾರಣ ಅಶ್ವಿನ್ಗೆ ಸ್ಥಾನ ದೊರೆಯಲಿದೆಯಾ ಎನ್ನುವ ಕುತೂಹಲವಿತ್ತು. ಆದರೆ ಅಶ್ವಿನ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.