

ಬೆಂಗಳೂರು, ಜುಲೈ 25: ತಂಡಕ್ಕೆ ಆಯ್ಕೆಗೊಳ್ಳಲು ಸಾಕಾಗುವಷ್ಟು ಸಾಧನೆ ಇಲ್ಲದಿದ್ದರಿಂದ ತಿವಾರಿ ಅವರನ್ನು ಆರಿಸಲಾಗಿಲ್ಲ ಎಂಬ ಕಾರಣನೀಡಿ, ಭಾರತ ಕ್ರಿಕೆಟ್ ಆಯ್ಕೆ ಸಮಿತಿಯು ಮನೋಜ್ ತಿವಾರಿ ಅವರನ್ನು ಭಾರತ ಎ ಮತ್ತು ದುಲೀಪ್ ಟ್ರೋಫಿ ತಂಡದಿಂದ ಹೊರಗಿಟ್ಟಿದ್ದು, ಈ ಬಗ್ಗೆ ತಿವಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಆಯ್ಕೆ ಸಮಿತಿಯು ಮುಂಬರಲಿರುವ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ನಾಲ್ಕು ದಿನಗಳ ಎರಡು ಪಂದ್ಯಗಳಿಗೆ 6 ತಂಡಗಳನ್ನು ಮತ್ತು ದುಲೀಪ್ ಟ್ರೋಫಿಗಾಗಿ 3 ತಂಡಗಳನ್ನು ಆರಿಸಿದೆ. ಆಸ್ಟ್ರೇಲಿಯಾ ಎ ಮತ್ತು ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ನಾಲ್ಕು ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಆಯ್ಕೆ ಸಮಿತಿಯು ಇದಕ್ಕಾಗಿ ಭಾರತ ಎ ಮತ್ತು ಬಿ ತಂಡಗಳು ಕಳುಹಿಸಲಿದೆ.
ಆದರೆ ಆಯ್ಕೆ ಸಮಿಯಿ ಪ್ರಕಟಿಸಿರುವ ಯಾವುದೇ ತಂಡದಲ್ಲೂ ಮನೋಜ್ ಗೆ ಸ್ಥಾನ ನೀಡಿಲ್ಲ. 2017-18ರ ಐಪಿಎಲ್ ನಲ್ಲಿ ಅಮೋಘ ಆಟ ಪ್ರದರ್ಶಿಸಿದರ ಹೊರತಾಗಿಯೂ ದೇಸಿ ತಂಡದಲ್ಲಿ ಸ್ಥಾನ ನೀಡದಿರುವುದು ತಿವಾರಿ ಬೇಸರಕ್ಕೆ ಕಾರಣವಾಗಿದೆ.
ಕಳೆದ ಐಪಿಎಲ್ ನಲ್ಲಿ ತಿವಾರಿ 126.7ರ ಸರಾಸರಿಯಲ್ಲಿ ಒಟ್ಟು 507 ರನ್ ಸಾಧನೆ ಹೊಂದಿದ್ದರು. ಒಂದೇ ಸೀಸನ್ ನಲ್ಲಿ ಆಟಗಾರ ಗಳಿಸಿದ ಅತ್ಯಧಿಕ ಸರಾಸರಿ ಇದಾಗಿತ್ತು. ಇದಲ್ಲದೆ ತಿವಾರಿ, ವಿಜಯ್ ಹಜಾರೆ ಮತ್ತು ದೇವಧರ್ ಟ್ರೋಫಿಯಲ್ಲೂ 100ಕ್ಕೂ ಹೆಚ್ಚಿನ ರನ್ ಸರಾಸರಿ ಹೊಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಿವಾರಿ, 'ಭಾರತ ಎ ತಂಡಕ್ಕೆ ಆಯ್ಕೆ ಆಗುವುದಾಗಿ ನಾನು ನಿರೀಕ್ಷಿಸಿದ್ದೆ. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಒಬ್ಬ ಆಟಗಾರ ಉತ್ತಮ ಸಾಧನೆ ತೋರಿದಾಗ ಆತನನ್ನು ಪರಿಗಣಿಸಲಾಗುತ್ತದೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. 50 ಓವರ್ ಗಳ ಟೂರ್ನಮೆಂಟ್ ನಲ್ಲೂ ನಾನು ದಾಖಲೆ ನಿರ್ಮಿಸಿದ್ದೆ. ಆದರೆ ಅವ್ಯಾವುವೂ ಪ್ರಯೋಜನಕ್ಕೆ ಬರಲಿಲ್ಲ' ಎಂದರು.
'ಇದಕ್ಕಿಂತ ಇನ್ನೇನು ಮಾಡಬಹುದೋ ನನಗೆ ಗೊತ್ತಾಗುತ್ತಿಲ್ಲ. ಆಯ್ಕೆ ಸಮಿತಿಯಿಂದ ಈ ಬಗ್ಗೆ ಸ್ಪಷ್ಟನೆಯಿಲ್ಲ. ಅವರ ಸ್ಪಷ್ಟನೆಗಾಗಿ ಕಾಯುತ್ತಿದ್ದೇನೆ. ತಂಡಕ್ಕೆ ಆಯ್ಕೆಗೊಳ್ಳಬೇಕಾದರೆ ಅದಕ್ಕಿರುವ ಮಾನದಂಡಗಳೇನು ಎಂಬುದನ್ನು ಆಯ್ಕೆ ಸಮಿತಿ ತಿಳಿಸಿದರೆ ನಾನು ಮುಂದಾದರೂ ಅತ್ತ ಲಕ್ಷ್ಯ ಹರಿಸುತ್ತೇನೆ' ಎಂದು ತಿವಾರಿ ಬೇಸರ ತೋರಿಕೊಂಡರು.