ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಅಜೇಯವಾಗಿದ್ದರೂ, ಅಗ್ರ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ವಿಶೇಷವಾಗಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಿಂದ ಸಾಗುತ್ತಿದ್ದು, ಈ ಕುರಿತು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಪ್ರತಿಕ್ರಿಯಿಸಿದ್ದಾರೆ.

ಈ ಟಿ20 ವಿಸ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಸವಾಲು ಇದೆ. ಆದರೆ ಅವರ ಅತ್ಯುತ್ತಮ ಆಟವು ಕಡಿಮೆ ಅನುಭವಿ ಆಟಗಾರರಿಗೆ ಹೆಜ್ಜೆ ಹಾಕಲು ಮತ್ತು ತಂಡದ ಗೆಲುವಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ವಿಕ್ರಮ್ ರಾಥೋರ್ ಹೇಳಿದ್ದಾರೆ.
ಗುರುವಾರ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಭಾರತ ತಂಡವು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಸೂಪರ್ 8ರ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿತು. ಆದಾಗ್ಯೂ, ವಿರಾಟ್ ಕೊಹ್ಲಿ ಪವರ್ಪ್ಲೇನಲ್ಲಿ ಮತ್ತೊಮ್ಮೆ ವಿಫಲರಾದರು ಮತ್ತು ಪಂದ್ಯಾವಳಿಯಲ್ಲಿ ತಮ್ಮ ಮೊದಲ ಎರಡಂಕಿಯ ಮೊತ್ತ 24 ರನ್ ಗಳಿಸಿ ಔಟಾದರು.
"ವಿರಾಟ್ ಕೊಹ್ಲಿ ಫಾರ್ಮ್ನಿಂದ ನನಗೆ ಸಂತೋಷವಿಲ್ಲ. ಅವರು ಅಲ್ಲಿ ಹೆಚ್ಚು ರನ್ ಗಳಿಸಿದರೆ ನಾನು ಅದನ್ನು ಇಷ್ಟಪಡುತ್ತೇನೆ," ಎಂದು ಕೊಹ್ಲಿ ಕೊಡುಗೆಯಿಲ್ಲದೆ ಪಂದ್ಯಾವಳಿಯಲ್ಲಿ ತಂಡದ ಅಜೇಯ ಓಟದ ಬಗ್ಗೆ ಕೇಳಿದಾಗ ವಿಕ್ರಮ್ ರಾಥೋರ್ ಉತ್ತರಿಸಿದರು.

"ಹೌದು, ನೀವು ಕೆಲವೊಮ್ಮೆ ಸವಾಲು ಎದುರಿಸುವುದು ಒಳ್ಳೆಯದು. ಭಾರತದ ತಂಡದಲ್ಲಿ ಕೆಲವೊಮ್ಮೆ ಹೆಚ್ಚು ಬ್ಯಾಟಿಂಗ್ ಮಾಡದ ಹುಡುಗರು, ಇಂದು ರನ್ ಗಳಿಸುವವರು ಮತ್ತು ನಮ್ಮ ಮಧ್ಯಮ ಕ್ರಮಾಂಕವು ತಂಡದ ನೆರವಿಗೆ ಬಂದಿತು. ಹಾಗಾಗಿ ಇದನ್ನು ನೋಡಲು ಚೆನ್ನಾಗಿತ್ತು," ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ತಿಳಿಸಿದರು.
ರಿಷಭ್ ಪಂತ್ ಆಟ ಆಕರ್ಷಕವಾಗಿತ್ತು ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಅರ್ಧಶತಕದೊಂದಿಗೆ ಅಫ್ಘಾನಿಸ್ತಾನ ತಂಡದಿಂದ ಪಂದ್ಯದ ಗೆಲುವನ್ನು ಕಸಿದುಕೊಂಡರು.
ಭಾರತ ತಂಡವು ಶನಿವಾರ, ಜೂನ್ 22ರಂದು ಆಂಟಿಗುವಾದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ನಾಲ್ವರು ಸ್ಪಿನ್ನರ್ಗಳನ್ನು ಹೊಂದಿದೆ ಮತ್ತು ಕೆರಿಬಿಯನ್ನ ಪರಿಸ್ಥಿತಿಗಳನ್ನು ಪರಿಗಣಿಸಿದರೆ, ಇದು ತಂಡವನ್ನು ಬಲಿಷ್ಠಗೊಳಿಸುತ್ತದೆ.

"ನಾವು ಯಾವಾಗಲೂ ತಂಡವಾಗಿ ಉತ್ತಮ ಆಳವನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ಇಲ್ಲಿನ ಪರಿಸ್ಥಿತಿಗಳು ನಮಗೆ ಹೆಚ್ಚು ಸರಿಹೊಂದುತ್ತವೆ. ಏಕೆಂದರೆ ನಾವು ಕೆಲವೊಮ್ಮೆ ಎರಡು ಅಥವಾ ಮೂರು ಸ್ಪಿನ್ನರ್ಗಳನ್ನು ಆಡಿಸಲು ಶಕ್ತರಾಗಿದ್ದೇವೆ. ಹಾಗಾಗಿ ಇದು ನಮ್ಮ ಅತ್ಯುತ್ತಮ ತಂಡವಾಗಬಹುದು," ಎಂದು ವಿಕ್ರಮ್ ರಾಥೋರ್ ಅಭಿಪ್ರಾಯಪಟ್ಟರು.
"ಅಕ್ಷರ್ ಪಟೇಲ್ ಅವರಂತಹವರು ಎಂಟನೇ ಕ್ರಮಾಂಕದಲ್ಲಿ ಆಡುವುದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಏಕೆಂದರೆ ಅಕ್ಷರ್ ಬ್ಯಾಟಿಂಗ್ ಮಾಡಬಲ್ಲರು ಮತ್ತು ಸದ್ಯ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದ್ದರಿಂದ, ಇದು ನಿಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ," ಎಂದು ಹೇಳಿದರು.
ಭಾರತ ತಂಡವು ನ್ಯೂಯಾರ್ಕ್ನಲ್ಲಿ ಆಡಿದ ಮೂರು ಪಂದ್ಯಗಳಿಗಿಂತ ಕೆರಿಬಿಯನ್ನಲ್ಲಿನ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ನಿರೀಕ್ಷಿಸಿದ್ದರು.
"ನಾವು ಈಗಾಗಲೇ ನ್ಯೂಯಾರ್ಕ್ನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಆಡಿದ್ದೇವೆ. ಹೀಗಾಗಿ ಇಲ್ಲಿನ ಪಿಚ್ಗಳು ಉತ್ತಮವಾಗಿರುತ್ತವೆ ಎಂದು ನಿರೀಕ್ಷಿಸುತ್ತಿದ್ದೇನೆ," ಎಂದು ವಿಕ್ರಮ್ ರಾಥೋರ್ ತಿಳಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಬಾಂಗ್ಲಾದೇಶ ತಂಡವು ಭಾರತ ವಿರುದ್ಧದ ಪಂದ್ಯಕ್ಕೆ ಬರುತ್ತಿದೆ ಮತ್ತು ಪಂದ್ಯಾವಳಿಯಲ್ಲಿ ಸುಲಭವಾಗಿ ಸೋಲಿಸುವ ತಂಡಗಳಲ್ಲಿ ಒಂದಾಗಿದೆ.