ಕೊಹ್ಲಿ ಮನಗೆಲ್ಲಬೇಕೆಂಬ ಸಲಹೆ ನೀಡಿದ್ದು ಈತ
ಇನ್ನು ಆಕಾಶ್ ದೀಪ್ ಅವರಿಗೆ ವಿರಾಟ್ ಕೊಹ್ಲಿಯ ಮನ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಮತ್ತು ಟೀಮ್ ಇಂಡಿಯಾ ಪ್ರತಿನಿಧಿಸುವ ಅವಕಾಶ ಲಭಿಸಲಿದೆ ಎಂಬ ಸಲಹೆಯನ್ನು ನೀಡಿದ್ದು ಆಕಾಶ್ ದೀಪ್ ಜತೆ ಪಶ್ಚಿಮ ಬಂಗಾಳ ಪರ ಕಣಕ್ಕಿಳಿಯುತ್ತಿದ್ದ ಆಟಗಾರ ಮನೋಜ್ ತಿವಾರಿ. ಈ ವಿಷಯವನ್ನು ಖುದ್ದಾಗಿ ಆಕಾಶ್ ದೀಪ್ ಅವರೇ ಇತ್ತೀಚಿಗಷ್ಟೆ ನಡೆದ ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಭಾರತದ ನಾಯಕ, ನೀನು ಅವರ ಮನಗೆಲ್ಲುವ ರೀತಿ ಬೌಲಿಂಗ್ ಮಾಡಿದರೆ ಅವಕಾಶಗಳು ಲಭಿಸಲಿವೆ ಎಂದು 2 ವರ್ಷಗಳ ಹಿಂದೆ ಮನೋಜ್ ತಿವಾರಿ ಸಲಹೆ ನೀಡಿದ್ದರಂತೆ.
ಆಕಾಶ್ ದೀಪ್ ಐಪಿಎಲ್ ಪ್ರದರ್ಶನ
ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 5 ಪಂದ್ಯಗಳಲ್ಲಿ ಕಣಕ್ಕಿಳಿದ ಆಕಾಶ್ ದೀಪ್ ಒಟ್ಟು 18.5 ಓವರ್ ಬೌಲಿಂಗ್ ಮಾಡಿ 5 ವಿಕೆಟ್ ಪಡೆದಿದ್ದಾರೆ. ಆದರೆ, ಆಕಾಶ್ ದೀಪ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆಗಾರರ ಮನ ಗೆಲ್ಲುವಲ್ಲಿ ವಿಫಲರಾಗಿದ್ದು, 10.88ರ ಎಕಾನಮಿಯಲ್ಲಿ ರನ್ ನೀಡಿ ದುಬಾರಿಯಾಗಿದ್ದಾರೆ.
ಕೆಕೆಆರ್ ವಿರುದ್ಧ ಮಿಂಚಿದ್ದ ಆಕಾಶ್ ದೀಪ್
ಈ ಬಾರಿಯ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಕಾಶ್ ದೀಪ್ 3 ವಿಕೆಟ್ ಪಡೆದಿದ್ದರು ಹಾಗೂ 45 ರನ್ ನೀಡಿ ದುಬಾರಿಯೂ ಆಗಿದ್ದರು. ಇದು ಆಕಾಶ್ ದೀಪ್ ಪಾಲಿಗೆ ಅತ್ಯುತ್ತಮ ಪ್ರದರ್ಶನವಾಗಿದೆ.