ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಮತ್ತು ತಮ್ಮ ಸುಪ್ರಸಿದ್ಧ ವೃತ್ತಿಜೀವನದ ಮೂಲಕ ತಮ್ಮ ಬೆನ್ನಿಗೆ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ.
ಎಂಎಸ್ ಧೋನಿ ಭಾರತದ ನಾಯಕರಾಗಿ ಎರಡು ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಇತ್ತೀಚಿಗೆ 2023ರಲ್ಲಿ ಎಂಎಸ್ ಧೋನಿ 41ನೇ ವಯಸ್ಸಿನಲ್ಲಿ ಐದನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರ್ಗದರ್ಶನ ನೀಡಿದರು.
ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಇಮ್ರಾನ್ ತಾಹಿರ್ ಅವರು 2023ರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಮಾಡುವ ಮೂಲಕ, ಎಂಎಸ್ ಧೋನಿ ಅವರನ್ನು ಹಿಂದಿಕ್ಕಿ ಟಿ20 ಪಂದ್ಯಾವಳಿಯನ್ನು ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ಗರಿಮೆಗೆ ಪಾತ್ರರಾದರು.

ಇಮ್ರಾನ್ ತಾಹಿರ್ 2023ರ ಸಿಪಿಎಲ್ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 13 ಪಂದ್ಯಗಳಲ್ಲಿ ಕೇವಲ 6.22ರ ಪ್ರಭಾವಶಾಲಿ ಎಕಾನಮಿ ದರದೊಂದಿಗೆ 18 ವಿಕೆಟ್ಗಳನ್ನು ಪಡೆದರು.
"ಈ ಸುಂದರ ಗಯಾನಾ ಅಮೆಜಾನ್ ವಾರಿಯರ್ಸ್ ಫ್ರಾಂಚೈಸ್ಗಾಗಿ ಆಡುವುದು ಮತ್ತು ಯಾವಾಗಲೂ ಬಂದು ನಮ್ಮನ್ನು ಬೆಂಬಲಿಸುವ ಈ ಸುಂದರ ಜನರಿಗಾಗಿ ಆಡುವುದು ಉತ್ತಮ ಅನುಭವವಾಗಿದೆ," ಎಂದು ಇಮ್ರಾನ್ ತಾಹಿರ್ ಹೇಳಿದರು.

"ನಾನು ಮೊದಲು ಸರ್ವಶಕ್ತನಿಗೆ ಕೃತಜ್ಞನಾಗಿದ್ದೇನೆ. ಪಂದ್ಯಾವಳಿಗೆ ಬರುವಾಗ, ಎಲ್ಲರೂ ನಾನು ನಾಯಕನಾಗಿದ್ದೇನೆ ಎಂದು ಜೋಕ್ಗಳನ್ನು ಕಳುಹಿಸುತ್ತಿದ್ದರು. ಹಾಗಾಗಿ ಆ ವಿಷಯಗಳು ನನ್ನನ್ನು ಪ್ರೇರೇಪಿಸಿವೆ ಎಂದು ನಾನು ಭಾವಿಸುತ್ತೇನೆ. ಆ ರೀತಿ ಕುಚೋದ್ಯ ಮಾಡಿದ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ".
"ನಾನು ನನ್ನ ಕುಟುಂಬ, ಎಲ್ಲಾ ಆಟಗಾರರ ಕುಟುಂಬಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನಮ್ಮೊಂದಿಗಿದ್ದಾರೆ. ಇದು ಉತ್ತಮ ಪ್ರಯಾಣ, ಬಹಳ ವಿಶೇಷವಾದ ಪ್ರಯಾಣ," ಎಂದು ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಪಂದ್ಯದ ನಂತರ ಹೇಳಿದರು.
"ನಮ್ಮ ವಿಶ್ಲೇಷಕ ಪ್ರಸನ್ನ ಅಗೋರಂ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಪ್ರತಿದಿನ 20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ನನಗೆ ಎಲ್ಲಾ ಯೋಜನೆಗಳನ್ನು ನೀಡುತ್ತಿದ್ದಾರೆ"..
"ನಾನು ಅವರಿಗೆ ನಿಜವಾಗಿಯೂ ಆಭಾರಿಯಾಗಿದ್ದೇನೆ ಮತ್ತು ಭಾರತದ ರವಿಚಂದ್ರನ್ ಅಶ್ವಿನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಪ್ರಶಸ್ತಿ ಗೆಲ್ಲುತ್ತೇವೆ ಎಂದು ಅವರು ಪಂದ್ಯಾವಳಿಯ ಮೊದಲೇ ಹೇಳಿದ್ದರು," ಎಂದು ಇಮ್ರಾನ್ ತಾಹಿರ್ ನೆನಪಿಸಿಕೊಂಡರು.