
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ತಂಡದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿದ್ದು ತಂಡದ ಹಿನ್ನೆಡೆಗೆ ಕಾರಣವಾಯಿತು ಎಂದು ಮಂಜ್ರೇಕರ್ ಹೇಳಿದ್ದಾರೆ.
ರವೋಂದ್ರ ಜಡೇಜಾ ಅವರನ್ನು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಅವರ ಬ್ಯಾಟಿಂಗ್ನ ಕಾರಣಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆ ಯೋಜನೆ ತಂಡಕ್ಕೆ ಹಿನ್ನೆಡೆಯಾಗಿದೆ. ಆ ಸ್ಥಾನಕ್ಕೆ ಹನುಮ ವಿಹಾರಿಯಂತಾ ಸ್ಪೆಶಲಿಸ್ಟ್ ಬ್ಯಾಟ್ಸ್ಮನ್ನನ್ನು ತಂಡಕ್ಕೆ ಸೇರಿಸಿಕೊಂಡಿದ್ದರೆ ತಂಡಕ್ಕೆ ಸಹಾಯವಾಗುತ್ತಿತ್ತು. ಅಂಕಪಟ್ಟಿಯಲ್ಲಿ ಭಾರತ ಮತ್ತಷ್ಟು ಹೆಚ್ಚಿನ ರನ್ಗಳಿಸಲು ಸಾಧ್ಯವಾಗುತ್ತಿತ್ತು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ನಂತಾ ಪಿಚ್ನಲ್ಲಿ ರವೀಂದ್ರ ಜಡೇಜಾ ಅವರನ್ನು ಬೌಲಿಂಗ್ ಕಾರಣಕ್ಕೆ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ ಅವರು ಬ್ಯಾಟಿಂಗ್ನಲ್ಲಿ 31 ರನ್(ಮೊದಲ ಇನ್ನಿಂಗ್ಸ್ನಲ್ಲಿ 15 ರನ್, 2ನೇ ಇನ್ನಿಂಗ್ಸ್ನಲ್ಲಿ 16 ರನ್) ಮಾತ್ರವೇ ಗಳಿಸಿದರು ಎಂದು ಮಂಜ್ರೇಕರ್ ಹೇಳಿದ್ದಾರೆ.
"ಉದಾಹರಣೆಗೆ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಹನುಮ ವಿಹಾರಿಯನ್ನು ಆರಿಸಿದ್ದರೆ ಆತ ರಕ್ಷಣಾತ್ಮಕವಾಗಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಕಾರಣ ತಂಡಕ್ಕೆ ನೆರವಾಗುತ್ತಿತ್ತು. 170 ರನ್ಗಳಿಸಿದ್ದ ಭಾರತೀಯ ತಂಡ ಬಹುಶಃ 220, 225 ಅಥವಾ 230 ರನ್ಗಳಿಸಲು ಸಾಧ್ಯವಾಗಬಹುದಿತ್ತು" ಎಂದು ಮಂಜ್ರೇಕರ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 32 ರನ್ಗಳ ಹಿನ್ನೆಡೆಯನ್ನು ಅನುಭವಿಸಿತು. ಬಳೀಕ ಎರಡನೇ ಇನ್ನಿಂಗ್ಸ್ನಲ್ಲಿ 170 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ 139 ರನ್ಗಳ ಗುರಿಯನ್ನು ನ್ಯೂಜಿಲೆಂಡ್ ತಂಡ ಪಡೆದುಕೊಂಡಿತ್ತು. ಇದನ್ನು ಇನ್ನೂ 8 ವಿಕೆಟ್ ಉಳಿದಿರುವಂತೆಯೇ ಮೀರಿ ನಿಂತು ವಿಜಯ ಸಾಧಿಸಿತ್ತು.